ಏಕಾದಶಿ ಉಪವಾಸ - ವೈಜ್ಞಾನಿಕ ಮತ್ತು ಪೌರಾಣಿಕ ಮಹತ್ವ


ಇಂದಿನ ದಿನದಲ್ಲಿ ದೇಹದ ಗಾತ್ರ ಕಡಿಮೆ ಮಾಡಲು, ಕೊಬ್ಬಿನಂಶ ಕಡಿಮೆ ಮಾಡಿಕೊಳ್ಳಲು ಡಯಟೀಷಿಯನ್ ಬಳಿ ಹೋಗಿ ಹಣ ಕೊಟ್ಟು ವಿಧ ವಿಧದ ಆಹಾರೋಪಾಯ, ವ್ಯಾಯಾಮ, ವಿಹಾರಗಳನ್ನು ಇಂದಿನವರು ಮಾಡುತ್ತಿದ್ದೇವೆ. ಧಾರ್ಮಿಕವಾಗಿ ವಿವಿಧ ಧರ್ಮಗಳು ಉಪವಾಸದ ಕುರಿತಾದ ಆಚರಣೆಗಳ ಬಗ್ಗೆ ತಿಳಿ ಹೇಳಿದೆ ಎಂಬುದು ನಮಗೆ ತಿಳಿದಿರುವ ವಿಚಾರ. ಹಿಂದೂಧರ್ಮದಲ್ಲಿ ಏಕಾದಶಿ ದಿನ ಉಪವಾಸದ ದಿನ.
 
 ಏಕಾದಶಿಯ ಬಗ್ಗೆ ಕೇಳಿರದ, ನಮ್ಮ ಪುರಾಣ ಪರಂಪರೆಗಳ ಬಗೆಗೆ ಏನೂ ಗೊತ್ತಿರದ, ಜಗತ್ಪ್ರಸಿದ್ಧ ಶಸ್ತ್ರವೈದ್ಯ ಅಲೆಕ್ಲಿಸ್ ಕಾರೆಲ್ ತನ್ನ ಖ್ಯಾತಕೃತಿ ‘Man the Unknown (ಅವ್ಯಕ್ತ ಮಾನವ)’ದಲ್ಲಿ ಒಂದು ಮಾತು ಹೇಳುತ್ತಾನೆ: “ಮನುಷ್ಯ ತಿಂಗಳಿಗೊಮ್ಮೆ, ಎರಡು ಬಾರಿ ಸಂಪೂರ್ಣ ನಿರಾಹಾರನಾಗಿರಲು ಕಲಿತರೆ ಅನಾರೋಗ್ಯದ ನಿಮಿತ್ತ ವೈದ್ಯರ ಬಳಿ ಹೋಗಬೇಕಾದ ಅಗತ್ಯವಿಲ್ಲ. ಉಪವಾಸವೇ ದೊಡ್ಡ ಚಿಕಿತ್ಸೆ.”

ನಮ್ಮ ಆಯುರ್ವೆದವೂ ಎಲ್ಲ ರೋಗಗಳಿಗೂ ಅಜೀರ್ಣವೆ ಕಾರಣ ಎನ್ನುತ್ತದೆ: “ಅಜೀರ್ಣಪ್ರಭಾವಾ ರೋಗಾಃ.”

ಹೊಟ್ಟೆಕೆಟ್ಟು ಜೀರ್ಣಶಕ್ತಿ ಕಡಿಮೆಯಾದಾಗ ಎಲ್ಲ ರೋಗಗಳೂ ದಾಳಿ ಮಾಡುತ್ತವೆ. ಉಂಡದ್ದೆಲ್ಲ ಕರಗುತ್ತಿರುವ ತನಕ ಯಾವ ರೋಗವೂ ಬರುವುದಿಲ್ಲ. ಹೊಟ್ಟೆ ಹಾಳಾದಾಗ ದೇಹವೂ ಹಾಳಾಗುತ್ತದೆ.

ಹೊಟ್ಟೆ ಹಾಳಾಗದಂತೆ ಕಾಪಾಡುವ ವಿಧಾನ ಅದಕ್ಕೆ ಪೂರ್ಣ ವಿಶ್ರಾಂತಿ. ಮಲಗಿದಾಗ ಕಣ್ಣಿಗೆ, ಕಿವಿಗೆ, ಇತರ ಇಂದ್ರಿಯಗಳಿಗೆ ವಿಶ್ರಾಂತಿ. ಬೆಳಗ್ಗಿನಿಂದ ರಾತ್ರಿಯ ತನಕವೂ ತಿನ್ನುತ್ತಲೇ ಇದ್ದರೆ, ತಿಂದದ್ದನ್ನು ಬೆಳಗಿನ ತನಕ ಜೀರ್ಣಿಸಿಕೊಳ್ಳಲೂ ಅವಕಾಶ ನೀಡದೆ ಇದ್ದರೆ ಪಚನೆಂದ್ರಿಯಕ್ಕೆ ವಿಶ್ರಾಂತಿಯೇ ಇಲ್ಲ. ಅದು ಸೋತು ಕೈಕಟ್ಟಿ ಕೂತಿತು ಎಂದರೆ ಅಜೀರ್ಣ. ಹಾಗಾಗಿ 15ದಿನಗಳಿಗೊಮ್ಮೆ 24 ಗಂಟೆಗಳ ಕಾಲ ಪೂರ್ಣ ವಿಶ್ರಾಂತಿ ದೊರಕಿತೆಂದರೆ ಈ ಪಚನೆಂದ್ರಿಯ ಮತ್ತೆ ದಕ್ಷವಾಗಿ ಕೆಲಸ ಮಾಡಲು ಸಿದ್ಧವಾಗುತ್ತದೆ.

ಇದು ಅಲೆಕ್ಸಿಸ್ ಕಾರೆಲ್ ಹೇಳಿದ ಮಾತು. ನಮ್ಮ ಪ್ರಾಚೀನ ಶಾಸ್ತ್ರಕಾರರೂ ಇದೇ ಮಾತನ್ನು ಹೇಳಿದರು. ಅಲೆಕ್ಸಿಸ್ ಕಾರೆಲ್ ಇದನ್ನು ವೈಜ್ಞಾನಿಕವಾಗಿ ಬರೆದರೆ ಪ್ರಾಚೀನರು ಏಕೆ-ಏನು ಅನ್ನೋ ವಿವರ ನೀಡದೆ ವಿಧಿವಾಕ್ಯವಾಗಿ ಬರೆದರು. ಹೊಸ ಗಾಳಿ ಕಿವಿಯೊಳಗೆ ಹೊಕ್ಕ ಜನಕ್ಕೆ ಈ ಮಾತು ಪ್ರಿಯವಾಗಲಿಲ್ಲ. ಅದಕ್ಕೆಂದೆ ಕಾರೆಲ್ ಹೀಗೆ ಹೇಳುತ್ತಾನೆ: “ಜನರಿಗೆ ನಾಗರಿಕತೆಯ ಭ್ರಮೆ ಹತ್ತಿದೆ. ಹೀಗೆ ನಾಗರಿಕತೆಯ ಅಮಲು ಹತ್ತಿದ ಜನಕ್ಕೆ ಈ ಉಪವಾಸದ ಉಪದೇಶ ಹಿಡಿಸಲಿಕ್ಕಿಲ್ಲ. ನಾಗರಿಕತೆ ಜನಾಂಗವನ್ನು ಹಾಳುಗೆಡಹುತ್ತಿದೆ. ಅದರಿಂದ ಸಕಾರಣವಾಗಿ ಹೇಳಿದರೂ ಜನ ನಂಬುವುದು ಕಷ್ಟ.”

ಈ ಎಲ್ಲ ದೃಷ್ಟಿಯಿಂದ ಏಕಾದಶಿ ತುಂಬ ಮಹತ್ವದ ದಿನ. ಅಂದು ವಾತಾವರಣದಲ್ಲಿ ಕೂಡ ಒಂದು ವಿಶಿಷ್ಟ ಶಕ್ತಿ ತುಂಬಿರುತ್ತದೆ. ಏಕಾದಶಿಯನ್ನು ‘ಹರಿದಿನ’ ಎಂದು ಕರೆಯುತ್ತಾರೆ. ಅಂದು ವೈಷ್ಣವೀಶಕ್ತಿ ಜಾಗೃತವಾಗಿ ಕೆಲಸ ಮಾಡುತ್ತದೆ ಎನ್ನುವುದು ತಾತ್ಪರ್ಯ.

ಗ್ರಹಣ ಕಾಲದಲ್ಲೂ ಹೀಗಾಗುತ್ತದೆ. ಆ ಸಮಯದಲ್ಲಿ ಶರೀರಕ್ಕೆ ಮೈಲಿಗೆ ಆದರೂ ಬುದ್ಧಿಗೆ ಮಹಾಮಡಿ. ಆಗ ನಮ್ಮ ಮೆದುಳಿನಲ್ಲಿ ಒಂದು ವಿಶಿಷ್ಟವಾದ ಶಕ್ತಿ ಜಾಗೃತವಾಗುತ್ತದೆ.

ಏಕಾದಶಿ ದಿನ ಆಹಾರತ್ಯಾಗ ಮಾಡಬೇಕು. ಆದರೆ ಮನಸ್ಸಿಗೆ ಹೆಚ್ಚು ಆಹಾರ ಕೊಡಬೇಕು. ಹೊಟ್ಟೆ ತುಂಬಿದರೆ ಬುದ್ಧಿ ಕೆಲಸ ಮಾಡೋದಿಲ್ಲ. ಹೀಗೆ ದೇಹ-ಬುದ್ಧಿ ಎರಡನ್ನೂ ಸಮತೋಲನದಲ್ಲಿಡಬೇಕಾಗುತ್ತದೆ. ಆಹಾರವನ್ನು ವರ್ಜಿಸುವುದು ಎಂದರೆ ಬುದ್ಧಿಯನ್ನು ಶುದ್ಧೀಕರಿಸುವುದು, ಚುರುಕುಗೊಳಿಸುವುದು ಎಂದೇ ಅರ್ಥ.

ಪ್ರತಿಪಕ್ಷದ ಹನ್ನೊಂದನೆಯ ದಿನ ಇಂಥ ಉಪವಾಸವನ್ನು ಆಚರಿಸುತ್ತಾರೆ. ಇಂಥ ಉಪವಾಸದೀಕ್ಷೆಯ ಮಹತ್ವದ ಬಗೆಗೆ ಪುರಾಣಗಳಲ್ಲಿ ಅನೇಕ ಕಥೆಗಳಿವೆ. ಅಂಬರೀಷ ಇಂಥ ಏಕಾದಶಿ ದೀಕ್ಷಿತರಲ್ಲಿ ಒಬ್ಬ.

ಏಕಾದಶಿಯ ದಿನ ಶುದ್ಧನಾಗಿ ನಿರಾಹಾರದಿಂದಿದ್ದು, ದ್ವಾದಶಿಯಂದು ಬೆಳಿಗ್ಗೆದ್ದು ದೇವರ ಪೂಜೆ ಮಾಡಿ ತೀರ್ಥ ಸ್ವೀಕರಿಸಿ ಆಹಾರ ಸೇವಿಸುವುದು ಅವನ ದೀಕ್ಷೆ.

ಇಂಥ ಒಂದು ಘಟನೆಯ ಮೂಲಕ ಅಂಬರೀಷನ ಉಪವಾಸದ ಮಹತ್ವ, ಭಗವದ್ ಭಕ್ತಿಯ ಮಹತ್ವ ಇವೆರಡನ್ನೂ ಶುಕಾಚಾರ್ಯರು ಭಾಗವತದಲ್ಲಿ ವಿವರಿಸಿದ್ದಾರೆ.

ಒಂದು ಏಕಾದಶಿ. ಅಂಬರೀಷ ಉಪವಾಸವನ್ನಾಚರಿಸಿ ಮರುದಿನ ಬೆಳಗ್ಗೆದ್ದು ಮುಹೂರ್ತ ದಾಟುವುದರೊಳಗೆ ಪಾರಣೆ ಮಾಡಬೇಕು ಎನ್ನುವಷ್ಟರಲ್ಲಿ ದೂರ್ವಾಸರು ಅತ್ತ ಬಂದರು. ಅಂಬರೀಷ ಅವರನ್ನೂ ಪಾರಣೆಗೆ ಆಹ್ವಾನಿಸಿದ. ದುರ್ವಾಸರು ಮಹಾ ಕೋಪಿಷ್ಠ. “ಸ್ವಲ್ಪ ಕಾದಿರು, ಸ್ನಾನ ಮಾಡಿ ಬರುತ್ತೇನೆ,” ಎಂದು ಹೊರಟು ಹೋದರು.

ದುರ್ವಾಸರು ಇವನ ವ್ರತನಿಷ್ಟೆಯನ್ನು ಪರೀಕ್ಷಿಸಲೆಂದೇ ಬಂದವರು. ಅವರ ಕೋಪವೂ ಒಂದು ಅನುಗ್ರಹವೆ. ಮಕ್ಕಳು, ತಪ್ಪು ಮಾಡಿದಾಗ ದೊಡ್ಡವರು ಶಿಕ್ಷೆ ಕೊಡುವುದಿದೆ. ಅದು ಶಿಕ್ಷೆ ಅಲ್ಲ; ಶಿಕ್ಷಣ. ದುರ್ವಾಸರದೂ ಹಾಗೆಯೆ. ಭಕ್ತರ ಶಿಕ್ಷಣಕ್ಕಾಗಿ ಅವರದೊಂದು ನಾಟಕ.

ಇನ್ನೇನು ಪಾರಣದ ಮುಹೂರ್ತ ದಾಟುತ್ತದೆ. ಆದರೆ ದುರ್ವಾಸರ ಸುಳಿವಿಲ್ಲ. ಬಂದ ಅತಿಥಿಗೆ ಅಪಚಾರವಾಗಬಾರದು; ತನ್ನ ವ್ರತಕ್ಕೂ ಭಂಗ ಬರಬಾರದು. ಹೇಗೆ ನಡೆದುಕೊಳ್ಳಬೇಕು ಎನ್ನುವುದು ಸಮಸ್ಯೆ. ಅಂಬರೀಷನಿಗೆ ಉಭಯಸಂಕಟ.

ಹೊತ್ತು ಮೀರಿದರೆ ಏನು ಮಾಡುವುದು? ವ್ರತಲೋಪವಾಗಬಾರದಲ್ಲ? ಅಂಬರೀಷ ಈ ಸಮಸ್ಯೆಗೆ ಒಂದು ತಾತ್ಕಾಲಿಕ ಪರಿಹಾರ ಕೊಂಡುಕೊಂಡ. ಪಾರಣದ ಸಮಯ ಮೀರುವ ಮುನ್ನ ಊಟದ ಬದಲು ನೀರು ಕುಡಿದು ಬಿಡುವುದು. ನೀರು ಕುಡಿದರೆ ಊಟದ ಫಲವೂ ಆಯಿತು. ಉಪವಾಸದ ಫಲವೂ ಆಯಿತು. ಶಾಸ್ತ್ರಕಾರರು ನೀರನ್ನು ಆಹಾರದ ಪ್ರತಿನಿಧಿಯೂ ಹೌದು, ಉಪವಾಸದ ಪ್ರತಿನಿಧಿಯೂ ಹೌದು ಎಂದು ಒಪ್ಪಿಕೊಂಡಿದ್ದಾರೆ. ನಮ್ಮ ವೈದ್ಯಪದ್ಧತಿಗಳೂ ಇದನ್ನು ಅನುಮೋದಿಸಿವೆ.

ಹೀಗೆ ಯೋಚಿಸಿ ಅಂಬರೀಷ ಮಹಾರಾಜ ನೀರು ಕುಡಿದ. ಅಷ್ಟರಲ್ಲಿ ದುರ್ವಾಸರು ಬಂದರು. ವಿಷಯ ತಿಳಿದು ಸಿಟ್ಟುಗೊಂಡರು” “ನೀನು ಅತಿಥಿಗೆ ಅಪಚಾರ ಮಾಡಿದ್ದೀಯ, ನೀನು ಮೋಸಗಾರ, ನಿನಗೆ ಶಾಪ ಕೊಡುತ್ತೇನೆ,” ಎಂದು ಗುಡುಗಿದರು. ಕೃತ್ಯೆಯನ್ನು ಅಭಿಮಂತ್ರಿಸಿ ಅವನ ಮೇಲೆ ಛೂಬಿಟ್ಟರು. ಅಂಬರೀಷ ಮಹಾಭಗವದ್ ಭಕ್ತ. ಆತ ಭಗವಂತನಿಗೆ ಮೊರೆಹೊಕ್ಕ. ವಿಷ್ಣು ತನ್ನ ಭಕ್ತನ ರಕ್ಷಣೆಗಾಗಿ ಚಕ್ರವನ್ನು ಕಳುಹಿಸಿದ.

ದುರ್ವಾಸರ ಮಂತ್ರ ತಿರುಮಂತ್ರವಾಯಿತು. ವಿಷ್ಣುಚಕ್ರಕ್ಕೆ ಹೆದರಿದ ಕೃತ್ಯೆ ದುರ್ವಾಸರನ್ನೆ ಬೆನ್ನಟ್ಟಿತು. ಇದರಿಂದ ತಪ್ಪಿಸಿಕೊಳ್ಳಲು ದುರ್ವಾಸರು ಬ್ರಹ್ಮನಿಗೆ ಶರಣಾದರು. ತನ್ನನ್ನು ವಿಷ್ಣುಚಕ್ರದಿಂದ ಪಾರುಮಾಡಬೇಕೆಂದು ಪ್ರಾರ್ಥಿಸಿದರು. ಆಗ ಬ್ರಹ್ಮದೇವ ಹೇಳಿದ ಮಾತು: “ನಾರಾಯಣ ಜಗತ್ತಿನ ನಿಯಮಾಶಕ್ತಿ. ಅವನ ಆಜ್ಞೆಯಂತೆ ಚಲಿಸುವ ಭಕ್ತರು ನಾವು. ವಿಷ್ಣುಭಕ್ತನನ್ನು ತಡೆಯುವ ಶಕ್ತಿ ನಮಗಿಲ್ಲ. ನಾನು, ರುದ್ರಾದಿ ಸಮಸ್ತ ದೇವತೆಗಳು ಅವನ ಆಜ್ಞೆಯನ್ನು ತಲೆಯಲ್ಲಿ ಹೊತ್ತು ಬದುಕುವವರು. ಆ ಆಜ್ಞೆಯನ್ನು ಮೀರಿ ನಡೆಯುವ ಶಕ್ತಿ ಯಾರಿಗೂ ಇಲ್ಲ.”

ದುರ್ವಾಸರು ರುದ್ರನಲ್ಲಿಗೆ ಹೋಗಿ ಬೇಡಿದರು. ವಾಸ್ತವವಾಗಿ ದುರ್ವಾಸರು ಸ್ವಯಂ ರುದ್ರಾಂಶಸಂಭೂತರು. ಇದೆಲ್ಲ ಅಂಬರೀಷನ ಭಗವದ್ ಭಕ್ತಿಯ ಯೋಗ್ಯತೆಯ ಆಳವನ್ನು ಪರೀಕ್ಷಿಸಲು ದೊಡ್ಡವರು ಮಾಡಿದ ಒಂದು ನಾಟಕ. ಅದರಲ್ಲಿ ದುರ್ವಾಸರಿಗೆ ದ್ವಿಪಾತ್ರಾಭಿನಯ. ರುದ್ರದೇವರಿಂದಲೂ ನಿರಾಸೆಯ ಉತ್ತರವೆ ಬಂತು, “ಇಂಥ ಬ್ರಹ್ಮಾಂಡಗಳು ಎಷ್ಟೋ ಬಾರಿ ಸೃಷ್ಠಿಯಾಗಿವೆ; ನಾಶವಾಗಿವೆ. ಬ್ರಹ್ಮಾಂಡದಲ್ಲಿ ನೂರಾರು ಬಾರಿ ಸತ್ತು ಹುಟ್ಟುವ ಜೀವಗಳು ನಾವು. ಭಗವಂತನ ಲೀಲಾನಾಟಕದಲ್ಲಿ ನಾವೂ ಚಿಕ್ಕ ಪಾತ್ರಧಾರಿಗಳು. ಅವನು ಸೂತ್ರಧಾರ. ಅವನ ಆಜ್ಞೆಯನ್ನು ಮೀರಿ ನಾವೇನೋ ಮಾಡಲು ಸಾಧ್ಯವಿಲ್ಲ. ಆದ್ದರಿಂದ ನಿನಗೆ ರಕ್ಷೆ ಬೇಕಿದ್ದರೆ ವಿಷ್ಣುವಿಗೇ ಶರಣಾಗು. ಅವನು ನಿನ್ನನ್ನು ಕಾಪಾಡುತ್ತಾನೆ.”

ದುರ್ವಾಸರು ನೇರ ವಿಷ್ಣುವಿನ ಬಳಿಗೆ ಬಂದರು. “ನಿನ್ನ ಚಕ್ರದಿಂದ ನನ್ನನ್ನು ಪಾರುಮಾಡು,” ಎಂದು ಪ್ರಾರ್ಥಿಸಿಕೊಂಡರು. ಆಗ ವಿಷ್ಣು ಹೇಳಿದ: “ನನ್ನಿಂದಲೂ ಸಾಧ್ಯವಿಲ್ಲ. ಏಕೆಂದರೆ, ನಾನು ಭಕ್ತರ ಪರಾಧೀನ. ನಾನೂ ಅವರ ಮಾತನ್ನು ಮೀರಲಾರೆ. ನಾನೆಂದರೆ ಅವರಿಗೆ ಮೆಚ್ಚು. ಅವರೆಂದರೆ ನನಗೆ ಮೆಚ್ಚು. ನಮ್ಮಿಬ್ಬರ ಹೃದಯವೂ ಒಂದೇ. ಅಂಬರೀಷ ನನ್ನ ಮಹಾಭಕ್ತ. ನನ್ನನ್ನು ಬಿಟ್ಟು ಇನ್ನೊಬ್ಬರನ್ನು ಸ್ಮರಿಸಿದವನಲ್ಲ. ನಾನೂ ಅವನನ್ನು ಬಿಟ್ಟು ಕೊಡಲಾರೆ. ಭಕ್ತರ ಮೇಲೆ ನನಗೂ ಅಂಥ ಗೌರವ. ಅಂಬರೀಷ ಇನ್ನೊಬ್ಬನಿಗೆ ತಲೆಬಾಗಿದವನಲ್ಲ. ಆತನಲ್ಲಿಗೇ ಹೋಗಿ ಕ್ಷಮೆ ಯಾಚಿಸು.”

ದುರ್ವಾಸರು ಮರಳಿ ಅಂಬರೀಷನಲ್ಲಿಗೆ ಬರುತ್ತಾರೆ. “ಅಯ್ಯಾ, ನೀನು ಗೆದ್ದೆ. ನಾನೇ ಸೋತೆ. ತಪ್ಪಾಯಿತು,” ಎಂದು ಕೇಳಿಕೊಳ್ಳುತ್ತಾರೆ. ಅಂಬರೀಷನ ಪ್ರಾರ್ಥನೆಯಂತೆ ವಿಷ್ಣುಚಕ್ರ ಮರಳಿ ಹೋಗುತ್ತದೆ.

ಹೀಗೆ ದುರ್ವಾಸರ ಪ್ರಸಂಗದ ಏಕಾದಶಿಯ ಮಹತ್ವವನ್ನೂ ಭಗವದ್ ಭಕ್ತಿಯ ಮಹಿಮೆಯನ್ನೂ ಭಾಗವತ ವಿವರಿಸುತ್ತದೆ.

ಆಧಾರ: ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯರ ‘ಸಂಗ್ರಹ ಭಾಗವತ’


ಸಂಬಂಧಿತ ವಿಷಯಗಳು
ಏಕಾದಶಿ ವ್ರತ
ಪುತ್ರದಾ ಏಕಾದಶಿಯ ಮಹತ್ವ 
ವ್ರತಗಳು
ವ್ರತಗಳ ವಿಧಗಳು 

No comments:

Post a Comment

Note: only a member of this blog may post a comment.