ವೈಕುಂಠ ಏಕಾದಶಿ


'ಏಕ' ಶಬ್ದವು ಒಂದನ್ನು ಸೂಚಿಸುವುದಾದರೆ 'ದಶ' ಶಬ್ದವು ಹತ್ತನ್ನು ಸೂಚಿಸುವುದಾಗಿದೆ. ಒಟ್ಟಾರೆ 'ಏಕಾದಶಿ' ಶಬ್ದವು ಹನ್ನೊಂದನ್ನು ಸೂಚಿಸುವುದಾಗಿದೆ. ಏಕಾದಶಿ ಶಬ್ದವು ಪಾಡ್ಯ, ಬಿದಿಗೆ, ತದಿಗೆ ಇತ್ಯಾದಿ ತಿಥಿಗಳ ಆದಿಯಾಗಿ ಬರುವ ಹನ್ನೊಂದನೇ ತಿಥಿ. ಏಕಾದಶಿಯ ಪ್ರತಿಯೊಂದು ಮಾಸದ ಶುಕ್ಲ ಹಾಗೂ ಕೃಷ್ಣ ಪಕ್ಷಗಳಲ್ಲಿ ಬರುವ ಪ್ರತ್ಯೇಕ ಪ್ರತ್ಯೇಕ ತಿಥಿಯಾಗಿದೆ. ಏಕಾದಶಿ ತಿಥಿಯ ಮಟ್ಟಿಗೆ ಉಪವಾಸವನ್ನು ಆಚರಿಸುವುದೇ ಆಚರಣೆಯ ಒಂದು ಮುಖ್ಯ ಅಂಗ.

ಒಂದು ಮಾಸದಲ್ಲಿ ಬರುವ 30 ತಿಥಿಗಳ ಪೈಕಿ ಇತರ ಎಲ್ಲ 28 ತಿಥಿಗಳ ನಿರ್ಣಯವು ಸೂರ್ಯೋದಯ ಸಮಯಕ್ಕಾದರೆ ಏಕಾದಶಿ ತಿಥಿಯ ನಿರ್ಣಯವು ಸೂರ್ಯೋದಕ್ಕೆ ಸ್ವಲ್ಪ ಮುಂಚಿತವಾಗಿ ಬರುವ ಅರುಣೋದಯ ಸಮಯಕ್ಕಾಗಿದೆ. ಸಂಪ್ರದಾಯ ಭೇದಗಳಿಂದಾಗಿ ಸ್ಮಾರ್ಥ, ಶ್ರೀ ವೈಷ್ಣವ ಮತ್ತು ವೈಷ್ಣವ ಏಕಾದಶಿ ದಿನದ ಆಚರಣೆಯ ಒಮ್ಮೊಮ್ಮೆ ಪರಸ್ಪರ ಒಂದು ದಿನದ ಮಟ್ಟಿಗೆ ವ್ಯತ್ಯಾಸವಾಗಬಹುದಾಗಿದೆ.

ಏಕಾದಶಿಯನ್ನು ಬಿಟ್ಟು ಬೇರೆ ಬೇರೆ ತಿಥಿ ದಿನಗಳಲ್ಲಿ ಉಪವಾಸವನ್ನು ಆಚರಿಸುವುದಕ್ಕೆ ಅಷ್ಟಾಗಿ ಕಡ್ಡಾಯದ ನಿಯಮವು ಇರುವುದಿಲ್ಲವಾದರೆ, ಹದಿನೈದು ತಿಥಿಗಳಿಗೊಮ್ಮೆ ಬರುವ ಏಕಾದಶಿಯಂದು ಮಾತ್ರ ಉಪವಾಸದ ಆಚರಣೆಯನ್ನು ಶಾಸ್ತ್ರಗಳು ಕಡ್ಡಾಯವಾಗಿ ವಿಧಿಸಿರುವುದಾಗಿದೆ. ಏಕಾದಶಿ ಉಪವಾಸದ ಆಚರಣೆಯು ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಹೆಚ್ಚಿನ ಪರಿಣಾಮಕಾರಿ ಆಗುವುದು.

ಏಕಾದಶಿ ಆಚರಣೆಯು ಹದಿನೈದು ದಿನಗಳಿಗೊಮ್ಮೆ ಆಹಾರ ಪಾನೀಯಗಳ ಸೇವನೆ ವರ್ಜ್ಯ ಎನಿಸುವುದಾಗಿದ್ದು ನಿಟ್ಟಪವಾಸ ಎನಿಸುವುದಾಗಿದೆ. ಐದು ವರ್ಷಕ್ಕೊಳಪಟ್ಟವರೂ, 80 ವರ್ಷ ಮೇಲ್ಪಟ್ಟವರೂ, ರೋಗಿಗಳಾದವರೂ, ಗರ್ಭಿಣಿ ಹಾಗೂ ಬಾಣಂತಿಯರನ್ನು ಬಿಟ್ಟು ಪ್ರತಿಯೊಬ್ಬರೂ ಆ ದಿನದ ಮಟ್ಟಿಗೆ ನಿಟ್ಟುಪವಾಸವನ್ನು ತಪ್ಪದೇ ಆಚರಿಸಬೇಕಾಗುತ್ತದೆ. ಅಂಥ ಇತರರು ಮಾತ್ರ ಅಲ್ಪಾಹಾರವನ್ನು ಸ್ವೀಕರಿಸಬಹುದಾಗಿದೆ. ಏನೇ ಆಗಲಿ ಏಕಾದಶಿ ಮೂರನೇ ದಿನವಾದ ದ್ವಾದಶಿಯಂದು ಪ್ರಾತಃಕಾಲ ಸೂರ್ಯೋದ ನಂತರ ಊಟವನ್ನು ಮಾಡಿ ಪಾರಾಯಣ ಮಾಡಬೇಕು.

ಮಾನವರು ಕಣ್ಣು, ಕಿವಿ, ನಾಲಿಗೆ, ಚರ್ಮ ಮತ್ತು ಮೂಗುಗಳನ್ನು ಐದು ಜ್ಞಾನೇಂದ್ರಿಯಗಳನ್ನಾಗಿಯೂ ಹಾಗೂ ಕೈ, ಕಾಲು, ಕಾಲು, ಕಿರುನಾಲಿಗೆ, ಪಾಯು ಮತ್ತು ಉಪಸ್ಥಗಳನ್ನು ಐದು ಕರ್ಮೇಂದ್ರಿಯಗಳನ್ನಾಗಿ ಪಡೆದಿರುತ್ತಾರೆ. ಮನಸು ಹನ್ನೊಂದನೆಯ ಇಂದ್ರಿಯವಾಗಿ ಪರಿಗಣಿಸಲಾಗಿದ್ದು ಒಟ್ಟಾರೆ ಹನ್ನೊಂದು ಇಂದ್ರಿಯಯಗಳು ಏಕಾದಶೇಂದ್ರಿಯ ಗಳೆನಿಸುವುದಾಗಿದ್ದು, ಅವುಗಳ ಸಲುವಾಗಿ ಅವರವರ ಇಚ್ಛೆಯಂತೆ ಅವರವರು ಕಾರ್ಯಾಚರಣೆಗಳನ್ನು ಮಾಡುವವರಾಗುತ್ತಾರೆ.

ಹದಿನಾಲ್ಕು ವರ್ಷಕ್ಕೆ ಮೇಲ್ಪಟ್ಟ ಪ್ರತಿಯೊಬ್ಬ ವ್ಯಕ್ತಿಯೂ ಕೊನೆಯ ಪಕ್ಷ ಪ್ರತಿಯೊಬ್ಬ ವ್ಯಕ್ತಿಯೂ ಕೊನೆಯ ಪಕ್ಷ ಪ್ರತಿದಿನದಂತೆ ಹತ್ತು ಜನ್ಮಗಳಿಗೆ ಬೇಕಾಗುವಷ್ಟು ಕರ್ಮಫಲಗಳನ್ನು ಸಂಗ್ರಹಿಸುವವನಾಗಿರುತ್ತಾನೆ. ತಮ್ಮ ಹೃದಯದೊಳಗೆ ಭಗವಂತನನ್ನು ಸಂದರ್ಶಿಸಿರುವ ಅಪರೋಕ್ಷ ಜ್ಞಾನಿಗಳು, ಯೋಗಿವರ್ಯರು, ಧರ್ಮಿಷ್ಟರು ಇತ್ಯಾದಿಗಳನ್ನು ಬಿಟ್ಟರೆ ಇತರ ಸಾಮಾನ್ಯರೆಲ್ಲರೂ ದಿನಂಪ್ರತಿ ಒಟ್ಟಾರೆಯಾಗಿ ಪುಣ್ಯ ಫಲಗಳಿಗಿಂತ ಹೆಚ್ಚಾಗಿ ಪಾಪ ಫಲಗಳನ್ನೇ ಸಂಗ್ರಹಿಸುವವರಾಗುತ್ತಾರೆ. ಆದರೆ ಏಕಾದಶಿಯ ಆಚರಣೆಯಿಂದಾಗಿ ಹಿಂದಿನ ಹದಿನೈದು ದಿನಗಳಲ್ಲಿ ಸಂಗ್ರಹವಾಗಿರುವ ಅವರ ಪಾಪವು ನೀಗಿ ಅವರವರ ಜ್ಞಾನದ ಮಟ್ಟದಂತೆ ವಿಶೇಷವಾದ ಪುಣ್ಯವನ್ನು ಅವರು ಪಡೆಯಬಹುದಾಗಿದೆ.

ಏಕಾದಶಿ ಆಚರಣೆಯಿಂದ ಆಯುಸ್ಸು, ಆರೋಗ್ಯ ಮತ್ತು ಮನಸ್ಸಿನ ಧಾರ್ಡ್ಯತೆ ವೃದ್ಧಿಯಾಗುತ್ತದೆ. ಆದರೆ ಈಗ ನೂರಿನ್ನೂರು ವರ್ಷಗಳಿಂದಾಗಿ ಜೀವನಶೈಲಿಯಲ್ಲಿ ಅನೇಕ ಬದಲಾವಣೆಗಳು ಉಂಟಾಗಿದ್ದು ಏಕಾದಶಿಯನ್ನು ಆಚರಿಸುವವರ ಸಂಖ್ಯೆಯು ತೀವ್ರವಾಗಿ ಕಡಿಮೆಯಾಗುವುದಾಯಿತು. ಅಷ್ಟಾಗಿಯೂ ಆಧುನಿಕ ಜೀವನಶೈಲಿಯ ಒತ್ತಡದ ಸಲುವಾಗಿಯೂ ಇಂಥ ಕ್ಲಿಷ್ಟಕರ ಸನ್ನಿವೇಶಗಳನ್ನು ಎದುರಿಸಿ ಕೆಲವರು ಹದಿನೈದು ದಿನಕ್ಕೊಮ್ಮೆ ಏಕಾದಶಿಯನ್ನು ತಪ್ಪದೆ ಆಚರಿಸುವವರು.

ಮಾಸಕ್ಕೆ ಎರಡರಂತೆ ಪ್ರತಿ ಸಂವತ್ಸರವೂ ಒಟ್ಟಾರೆ 24 ಏಕಾದಶಿ ತಿಥಿಗಳಿಂದ ಕೂಡಿರುವುದಾದರೆ ಅದಕ್ಕೆ ಬದಲಾಗಿ ಮೂರು ವರ್ಷಕ್ಕೊಮ್ಮೆ ಬರುವ ಅಧಿಕ ಮಾಸದಿಂದಾಗಿ ಅಂಥ ಒಂದು ಸಂವತ್ಸರವು 26 ಏಕಾದಶಿ ತಿಥಿಗಳಿಂದ ಕೂಡುವುದಾಗಿದೆ. ಪ್ರತಿಯೊಂದು ಏಕಾದಶಿಗೂ ಒಂದೊಂದು ಪುರಾಣೋಕ್ತ ಹೆಸರಿರುವುದಾಗಿದ್ದು ಒಂದಲ್ಲ ಒಂದು ವಿಧದಲ್ಲಿ ಅವು ಒಂದೊಂದು ಹೆಚ್ಚಿನ ಪುಣ್ಯಪ್ರದವಾಗಬಲ್ಲದಾಗಿದೆ. ಅವುಗಳ ಪೈಕಿ ಆಷಾಢ ಮಾಸ ಶುಕ್ಲ ಪಕ್ಷದ ಏಕಾದಶಿಗೆ ಶಯನಿ ಅಂತಲೂ ಕರೆದಿರುವುದಾಗಿದೆ. ಅಷ್ಟೇ ಮುಖ್ಯವಾಗಿ ಅವುಗಳೆರಡೂ ಕ್ರಮವಾಗಿ ಪ್ರಥಮೇಕಾದಶಿ ಮತ್ತು ವೈಕುಂಠ ಏಕಾದಶಿ ಅಂತಲೂ ಸಾವಿರಾರು ವರ್ಷಗಳಿಂದ ಕರೆಯಲಾಗಿದ್ದು, ಅವುಗಳ ಹಿನ್ನೆಲೆಯಾಗಿ ಅನೇಕ ಮಹಿಮೆಗಳು ಇರುವುದಾಗಿದೆ.

ಪುರಾತನವಾದ ಹಿಂದಿನ ಒಂದು ಕಾಲದಲ್ಲಿ ಗೋಕಲವೆಂಬ ನಗರದಲ್ಲಿ ವಾಸವಾಗಿದ್ದ ವೈಖಾನಸನೆಂಬ ರಾಜರ್ಷಿಗೆ ಒಂದು ದಿನ ಇದ್ದಕ್ಕಿದ್ದಂತೆ ತನ್ನ ತಂದೆ ಸತ್ತ ಬಳಿಕ ಪ್ರೇತತ್ವ ನಿವಾರಣೆ ಹೊಂದದೇ ನರಕವನ್ನು ಅನುಭವಿಸುತ್ತಿರುವುದಾಗಿ ಅವನ ದಿವ್ಯ ದೃಷ್ಟಿಗೆ ಗೋಚರವಾಗುವುದಾಯಿತು. ಖಿನ್ನನಾದ ರಾಜನು ಪಂಡಿತರನ್ನು ಕುರಿತು ತನ್ನ ತಂದೆಯ ಆತ್ಮವನ್ನು ನರಕದಿಂದ ಪಾರು ಮಾಡುವ ಬಗೆಯನ್ನು ಕೇಳಿದನು. ಅದಕ್ಕೆ ಉತ್ತರವಾಗಿ ಅವರು ಅಂತಹ ನಿವಾರಣೆಯು ಕೇವಲ ಯಜ್ಞ ದಾನಗಳಿಂದ ಮಾತ್ರ ಆಗುವುದಲ್ಲ, ಜತೆಗೆ ಮಾರ್ಗಶಿರ್ಷ ಶುಕ್ಷ ಪಕ್ಷದ ಏಕಾದಶಿ ಆಚರಣೆಯ ಫಲವಾಗಿ ಅವನ ತಂದೆಯು ನರಕದಿಂದ ಪಾರಾಗುವನೆಂದರು. ಅವನು ಹಾಗೆಯೇ ಏಕಾದಶಿ ವೃತಾಚರಣೆಯನ್ನು ಒಂದಾದರ ಮೇಲೊಂದರಂತೆ ಆಚರಿಸಿ ಕೊನೆಗೆ ಮಾರ್ಗಶೀರ್ಷ ಶುಕ್ಲ ಪಕ್ಷದ ವೈಕುಂಠ ಏಕಾದಶಿ ವೃತವನ್ನು ಆಚರಿಸಿ ಸೂಕ್ತ ದಾನಾದಿಗಳನ್ನು ಮಾಡುತ್ತಿದ್ದಂತೆ ಅವನ ತಂದೆಯ ದೇಹವು ನರಕದಿಂದ ಬಿಡಲ್ಪಟ್ಟು, ಮುಂದೆ ಬೇರೆ ದೇಹವು ಪ್ರಾಪ್ತವಾಗಿ ಸ್ವರ್ಗವನ್ನು ಸೇರಿದನು ಎಂದು ಬ್ರಹ್ಮಾಂಡ ಪುರಾಣದಲ್ಲಿ ಉಲ್ಲೇಖಿಸಲಾಗಿದೆ.

ವೈಕುಂಠ ಏಕಾದಶಿಯ ದಿನ ಉಪವಾಸವಿದ್ದು, ಭಗವಂತನು ವಿಶೇಷ ಸನ್ನಿಧಾನವಿರುವ ದೇವಸ್ಥಾನಗಳಿಗೆ ಹೋಗಿ ಭಕ್ತಿಯಿಂದ ದೇವರ ರೂಪವನ್ನು ತಮ್ಮ ಹೃದಯದಲ್ಲಿ ಸಂದರ್ಶಿಸುವವರಿಗೆ ಅವರ ಹಿಂದಿನ ಘೋರ ಪಾಪಗಳು ನೀಗುತ್ತದೆ. ಮುಂದೆ ಮುಕ್ತಿ ಮತ್ತು ವೈಕುಂಠವನ್ನು ಪಡೆಯುತ್ತಾರೆ. 


ಲೇಖಕರು - ವಿಶ್ವಂಭರ ಗಣಪತಿ ವಿಠಲ ದಾಸರು

ಏಕಾದಶಿಯ ಇತರ ವಿಷಯಗಳು
ಏಕಾದಶಿ ವ್ರತ
ವ್ರತಗಳು
ವ್ರತಗಳ ವಿಧಗಳು 
ಕಾರ್ತಿಕ ಏಕಾದಶಿ
ಪುತ್ರದಾ ಏಕಾದಶಿಯ ಮಹತ್ವ
ಏಕಾದಶಿ ಉಪವಾಸ - ವೈಜ್ಞಾನಿಕ ಮತ್ತು ಪೌರಾಣಿಕ ಮಹತ್ವ
Dharma Granth

No comments:

Post a Comment

Note: only a member of this blog may post a comment.