ಧನು ಪೂಜೆ (ಧನುರ್ಮಾಸ)


ವರ್ಷಂಪ್ರತಿ ಧನುಮಾಸದಲ್ಲಿ ಶಿವಾಲಯಗಳಲ್ಲಿ ಬ್ರಾಹ್ಮೀ ಮುಹೂರ್ತದಲ್ಲಿ ’ಧನು ಪೂಜೆ’ ಎಂಬ ವಿಶೇಷ ಆರಾಧನೆ ನಡೆಯುತ್ತದೆ. ಅದರಲ್ಲಿ ಬಹಳಷ್ಟು ಮಂದಿ ಭಗವದ್ಭಕ್ತರು ಶ್ರದ್ಧಾ ಭಕ್ತಿಗಳಿಂದ ಪಾಲ್ಗೊಳ್ಳುತ್ತಾರೆ.

ದೇವಾಧಿದೇವ :

ಧನು ಮಾಸದಲ್ಲಿ ನಡೆಯುವ ಈ ಆರಧನೆಗೆ ವಿಶೇಷ ಮಹತ್ವವಿದೆ.  ಶೈವ ಸಂಪ್ರದಾಯದಂತೆ ಶಿವನು ಜಗತ್ತಿನ ಸೃಷ್ಠಿ- ಸ್ಥಿತಿ- ಲಯಗಳೆಂಬ ಕ್ರಿಯೆಗಳನ್ನು ನಿಯಂತ್ರಿಸುತ್ತಾನೆ ಎಂದು ನಂಬಲಾಗಿದೆ. ಆತನ ಆಧ್ಯಾತ್ಮಿಕ ವೈಶಿಷ್ಟ್ಯಗಳೆಂದರೆ ಆತನು
(೧) ಮಹಾತಪಸ್ವಿ ಮತ್ತು ಮಹಾಯೋಗಿ
(೨) ಭಯಂಕರ ಕೋಪಿಷ್ಠ
(೩) ಇನ್ನೊಬ್ಬರ ಸುಖಕ್ಕಾಗಿ ಯಾವುದೇ ಕಷ್ಟವನ್ನು ಅನುಭವಿಸಲು ಸಿದ್ಧನಾಗಿರುವವನು
(೪) ಸುಲಭವಾಗಿ ಪ್ರಸನ್ನನಾಗುವವನು (ಆಶುತೋಷ)
(೫) ಪ್ರಸನ್ನನಾಗಿ ಬೇಡಿದುದನ್ನು ನೀಡುವವನು
(೬) ದೇವರು ಮತ್ತು ದಾನವರು - ಹೀಗೆ ಎರಡೂ ವಿಧದ ಉಪಾಸಕರಿರುವವನು
(೭) ಊರ್ಧ್ವರೇತಸ್ (ವೀರ್ಯಪತನವಾಗದಿರುವವನು)
(೮) ಕಲ್ಪನಾತೀತ ಲೈಂಗಿಕ ಕ್ಷಮತೆ ಇರುವವನು
(೯) ಒಂದಕ್ಕೊಂದು ವಿರುದ್ಧವಾಗಿರುವ ವೈಶಿಷ್ಟ್ಯಗಳುಳ್ಳವನು. (ಸ್ವೀಕೃತಿ ಮತ್ತು ವಿಕೃತಿ) ಅಂದರೆ ಉತ್ಪತ್ತಿ- ಕ್ಷಯ ಕ್ಷಮತೆ, ಶಾಂತ - ಕೋಪಿಷ್ಠ, ಶೀತಲತೆ- ತೇಜಸ್ಸು, ಸಾತ್ತ್ವಿಕ - ತಾಮಸಿಕ ಇತ್ಯಾದಿ ಸತ್ತ್ವ, ರಜ ಮತ್ತು ತಮೋ ಗುಣಗಳನ್ನು ಎಂದರೆ ಅಜ್ಞಾನವನ್ನು ನಾಶಗೊಳಿಸಿ ತ್ರಿಗುಣಾತೀತರನ್ನಾಗಿ ಮಾಡುವವನು. ಆದುದರಿಂದ ಆತನು ಜಗದ್ಗುರುವು - ದೇವಾಧಿದೇವನಾದ ಮಹಾದೇವನು. ಈತನನ್ನು ಆರಾಧಿಸಿ ಪ್ರಸನ್ನಗೊಳಿಸಿ ಅಪೇಕ್ಷಿತ ಫಲವನ್ನು ಪಡೆಯುವುದು ಭಕ್ತರಿಗೆ ಸುಲಭವೆಂದು ನಂಬಲಾಗಿದೆ.

ಉತ್ತರಾಯಣ-ದಕ್ಷಿಣಾಯನ :
ಜ್ಯೋತಿಷ್ಯಾಸ್ತ್ರದಂತೆ
(೧) ಮಕರ ಸಂಕ್ರಮಣದಿಂದ ಕರ್ಕಾಟಕ ಸಂಕ್ರಮಣದ ವರೆಗಿನ ಆರು ತಿಂಗಳು ಉತ್ತರಾಯಣ 
(೨) ಕರ್ಕಾಟಕ ಸಂಕ್ರಮಣದಿಂದ ಮಕರ ಸಂಕ್ರಮಣದ ವರೆಗಿನ ಆರು ತಿಂಗಳು ದಕ್ಷಿಣಾಯನ.

ದೇವ ದೇವತೆಗಳಿಗೆ ಉತ್ತರಾಯಣವು ಹಗಲು-ದಕ್ಷಿಣಾಯನವು ರಾತ್ರಿ. ಆದುದರಿಂದ ದೇವಪ್ರತಿಷೆ  ವಗೈರೆ ವಿಶೇಷ ದೇವತಾ ಕಾರ್ಯಗಳಿಗೆ,  ಜಾತ್ರೆ  ಮಹೋತ್ಸವಗಳಿಗೆ  ಉತ್ತರಾಯಣವು ಯೋಗ್ಯವಾದ ಕಾಲ.  ಈ ಸಮಯದಲ್ಲಿ ಬ್ರಹ್ಮಾಂಡದಿಂದ ಭೂಮಿಯ ಕಡೆಗೆ ದೇವತೆಗಳ ಸತ್ವ ಲಹರಿಗಳು ಹೆಚ್ಚು ಪ್ರಮಾಣದಲ್ಲಿ ಆಕರ್ಷಿಸಲ್ಪಡುತ್ತವೆಯಾದರೆ  ದಕ್ಷಿಣಾಯನದ  ಹೆಚ್ಚಿನ  ಸಮಯದಲ್ಲಿ  ಮಾನವನಿಗೆ  ಸಹಿಸಲು ತ್ರಾಸದಾಯಕವಾದ ಯಮಲಹರಿಗಳು ಭೂಮಿಯ ಕಡೆಗೆ ಪ್ರಕ್ಷೇಪಿತವಾಗುತ್ತವೆ. ದಕ್ಷಿಣಾಯನವು  ದೇವತೆಗಳಿಗೆ  ವಿಶ್ರಾಂತಿಯ ಕಾಲವಾಗಿರುವುದರಿಂದ ಈ ಸಮಯದಲ್ಲಿ ದುಷ್ಟಶಕ್ತಿಗಳಿಂದ ಬರುವ ತ್ರಾಸದಾಯಕ ಲಹರಿಗಳ ಪ್ರಖರತೆಯನ್ನು ತಡೆಯಲು  ದೇವತೆಗಳಲ್ಲಿ  ಭಕ್ತಿಭಾವ, ಪ್ರಾರ್ಥನೆ, ಕೃತಜ್ಞತೆಯನ್ನು ಹೆಚ್ಚಿಸುವ ಹಬ್ಬ ಹರಿದಿನಗಳ, ಧಾರ್ಮಿಕ ಉತ್ಸವಗಳ ಆಚರಣೆ,  ವ್ರತ ವೈಕಲ್ಯಗಳ  ಆಚರಣೆ ಇತ್ಯಾದಿಗಳನ್ನು ಹೇಳಲಾಗಿದೆ.

ಸಂಧ್ಯಾಕಾಲದ ಆಚರಣೆ ಶ್ರೇಷ್ಠವಾಗಿದೆ :

ದಕ್ಷಿಣಾಯನವು ಮುಗಿದು ಉತ್ತರಾಯಣವು ಅಂತೆಯೇ ಉತ್ತರಾಯಣವು ಮುಗಿದು ದಕ್ಷಿಣಾಯನವು ಆರಂಭವಾಗುವ ಕಾಲಕ್ಕೆ ಸಂಧಿಕಾಲವೆಂದು ಹೇಳುತ್ತಾರೆ. ರಾತ್ರಿಯು ಮುಗಿದು ಸೂರ್ಯೋದಯವಾಗುವ ತನಕದ ಬ್ರಾಹ್ಮೀಮುಹೂರ್ತವೂ ಒಂದು ಸಂಧಿಕಾಲ. ಪೂರ್ವಾಹ್ನ ಮತ್ತು ಅಪರಾಹ್ನ ಇವುಗಳ ನಡುವಿನ ಮಧ್ಯಾಹ್ನವೂ ಹಗಲು-ರಾತ್ರಿಗಳ ನಡುವಿನ ಸಂಜೆಯೂ ಸಂವತ್ಸರಗಳ,  ಋತುಗಳ, ತಿಂಗಳುಗಳ ಅಂತ್ಯ- ಆದಿಗಳ ನಡುವಿನ ಸಮಯವೂ ಸಂಧಿಕಾಲಗಳಾಗಿವೆ. ಸಂಧಿಕಾಲವೆಂದರೆ ಪ್ರಕೃತಿಯಲ್ಲಿ ಬಹುಮುಖ್ಯ ಮಾರ್ಪಾಟುಗಳಾಗುವ ಕಾಲವಾಗಿದೆ. ಸಂಧಿಕಾಲದಲ್ಲಿ ಉತ್ಪನ್ನವಾಗುವ ಈಶ್ವರೀ ಚೈತನ್ಯವು ಸಂಧ್ಯಾ ಎನಿಸುವುದು. ಈ ಶಕ್ತಿಗೆ ಮಾಡುವ ವಂದನೆಯು ಸಂಧ್ಯಾವಂದನೆ ಎನಿಸುವುದು.ಶಾಸ್ತ್ರದಲ್ಲಿ ಹೇಳಿದಂತೆ ನಿರ್ದಿಷ್ಟ ಕಾಲದಲ್ಲಿ ಮಾಡುವ ಸಂಧ್ಯಾವಂದನೆಯಿಂದ ಆ ಈಶ್ವರೀ ಚೈತನ್ಯದ ಲಾಭದಿಂದ ಮುಂಬರುವ ಅನಿಷ್ಟಗಳು ದೂರವಾಗಿ ಜಗತ್ತಿಗೂ ಕಲ್ಯಾಣವಾಗುತ್ತದೆ. ಸಂಧ್ಯಾಕಾಲದ ಆಚರಣೆಗೆ ವಿಶೇಷವಾದ ಮಹತ್ವವಿದೆ.

ಧನು ಮಾಸದಲ್ಲಿ ಬ್ರಾಹ್ಮೀ ಮುಹೂರ್ತದಲ್ಲಿ ಶಿವನ ಆರಾಧನೆ :

ಮಾನವನ ಜೀವಿತಾವಧಿಯಲ್ಲಿ ಬರುವ ಕುಜ-ರಾಹು ಸಂಧಿ,  ರಾಹು-ಬ್ರಹಸ್ಪತಿ ಸಂಧಿ, ಶುಕ್ರಾರ್ಕ ಸಂಧಿ ಇವುಗಳಿಂದ ಮುಂದೆ ಬರಬಹುದಾದ ಮರಣ, ಅಪಘಾತ ಭಯ, ತ್ರಾಸದಾಯಕ ಪರಿಸ್ಥಿತಿ ಇಂತಹವುಗಳನ್ನು ಶಾಂತಗೊಳಿಸಿ ಸುಖಶಾಂತಿಯನ್ನು  ನೆಲೆಗೊಳಿಸಲು ಆಯಾಯ ವ್ಯಕ್ತಿಯ ವಯೋಮಾನಕ್ಕನುಸರಿಸಿ ಸಾಕಷ್ಟು ಮೊದಲಾಗಿ ಅಂದರೆ ಒಂದು ವರ್ಷ ಯಾ ಆರು ತಿಂಗಳ ಮೊದಲು ಸಂಧಿ ಶಾಂತಿಗಳನ್ನು ಮಾಡುವ ಪದ್ಧತಿಯು ಪ್ರಚಲಿತವಿದೆ.

ದಕ್ಷಿಣಾಯನದ ಕೊನೆಯ ತಿಂಗಳಾದ ಧನು ಮಾಸದಲ್ಲಿ ಮನು ಕುಲಕ್ಕೆ ತ್ರಾಸದಾಯಕವಾದ ಧನುರ್ವ್ಯತಿಪಾತ, ಧನುರ್ವೈಧೃತಿ ಮೊದಲಾದ ಅಶುಭ ದಿನಗಳೂ ಬರುತ್ತವೆ. ಸಕಾಲದಲ್ಲಿ ಯೋಗ್ಯ ರೀತಿಯಲ್ಲಿ ದೇವತಾರಾಧನೆ  ಮಾಡಿ  ಅವುಗಳಿಂದ ಮನುಕುಲಕ್ಕೆ ಬರಬಹುದಾದ ಕಂಟಕಗಳನ್ನು ಪರಿಹರಿಸುವ ಅವಶ್ಯಕತೆ ಇದೆ. ಬೆಳಗ್ಗಿನ ಜಾವ ರಾತ್ರಿಮುಗಿದು ಅರುಣೋದಯದ ತನಕದ  ಬ್ರಾಹ್ಮೀ  ಮುಹೂರ್ತವು  ಶಾಂತವೂ, ರಮಣೀಯವೂ ಆಗಿದ್ದು ಆಧ್ಯಾತ್ಮಿಕ ಸಾಧನೆಗೆ, ಸಂಧ್ಯಾವಂದನೆಗೆ, ಧ್ಯಾನಕ್ಕೆ, ದೇವತಾರಾಧನೆಗೆ ಅತ್ಯಂತ ಪ್ರಶಸ್ತವಾಗಿರುತ್ತದೆ. ಈ ಸಂಧ್ಯಾ ಕಾಲವು ಜಗತ್ತಿನ ಜಂಜಡಗಳಿಂದಾಗಿ ರಜ- ತಮಗುಣಗಳನ್ನು  ಹೆಚ್ಚಿಸುವ ಮಧ್ಯಾಹ್ನದ ಹಾಗೂ ಸಂಜೆಯ ಸಂಧ್ಯಾ ಕಾಲಗಳ ತುಲನೆಯಲ್ಲಿ ಹೆಚ್ಚು ಚೈತನ್ಯಕಾರಿಯಾಗಿದೆ. ಬ್ರಾಹ್ಮೀ ಮುಹೂರ್ತದಲ್ಲಿ ದ್ವಾಪರಯುಗದಲ್ಲಿ ತೀರಾ ಕಷ್ಟಕೋಟಲೆಗಳನ್ನು ಅನುಭವಿಸುತ್ತಿದ್ದ ಪಂಚಪಾಂಡವರು ಬೆಳಗ್ಗಿನ ಜಾವದಲ್ಲಿ ಬೇಗನೆ ಎದ್ದು ನಿತ್ಯವಿಧಿಗಳನ್ನುಪೂರೈಸಿ ಶುಚಿರ್ಭೂತರಾಗಿ ಅಕ್ಕಿ ಮತ್ತು ಬೇಳೆಗಳಿಂದ ತಯಾರಿಸಿದ ಹುಗ್ಗಿ ಭಕ್ಷ್ಯವನ್ನು ದೇವರಿಗೆ ಸಮರ್ಪಿಸಿ, ಆ ಪ್ರಸಾದವನ್ನು ಸ್ವೀಕರಿಸಿ ಶ್ರೀಕೃಷ್ಣನ ಅನುಗ್ರಹದಿಂದ ಕುರುಕ್ಷೇತ್ರ ಯುದ್ಧದಲ್ಲಿ ಜಯಗಳಿಸಿದ ವಿಶೇಷ ಮಾಸವೇ ಧನುಮಾಸವೆಂದು ಹೇಳಲಾಗಿದೆ. ದೇವಸ್ಥಾನಗಳ ವಠಾರಗಳಲ್ಲಿರುವ ಅಶ್ವತ್ಥವೃಕ್ಷಗಳು  ಅತೀ ಹೆಚ್ಚು ಪ್ರಾಣ ಶಕ್ತಿಯನ್ನು (ಆಮ್ಲ ಜನಕವನ್ನು) ಬಿಡುಗಡೆ ಮಾಡಿ ಅವು ತಮ್ಮ ಸಂಪರ್ಕಕ್ಕೆ ಬರುವವರಿಗೆ ಆರೊಗ್ಯ ಭಾಗ್ಯವನ್ನು ನೀಡುತ್ತವೆ.  ಧನುಮಾಸದಲ್ಲಿ ಪ್ರತಿ ದಿನ ಬ್ರಾಹ್ಮೀ ಮುಹೂರ್ತದಲ್ಲಿ ಸುಲಭವಾಗಿ ಪ್ರಸನ್ನನಾಗಿ ವಾಂಛಿತ ಫಲವನ್ನು ನೀಡುವ ಶಿವನನ್ನು (ಆಶುತೋಷನನ್ನು) ಆರಾಧಿಸಿದಲ್ಲಿ ಮುಂಬರುವ ಕಾಲದಲ್ಲಿ ಮನುಕುಲಕ್ಕೆ ಬರುವ ಕಂಟಕಗಳು ದೂರವಾಗಿ ರಕ್ಷಣೆ ಸಿಗುತ್ತದೆ ಎಂಬ ದೃಢ ನಂಬಿಕೆಯಿಂದ ಭಗವದ್ಭಕ್ತರು ಧನು ಪೂಜೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರುತ್ತಾರೆ. ಅಯ್ಯಪ್ಪ ಭಕ್ತರು ಕೂಡಾ ಧನು ಸಂಕ್ರಮಣಕ್ಕೆ ಮೊದಲೇ ಜಪಮಾಲೆ ಧರಿಸಿ, ಅಭಕ್ಷ್ಯಭಕ್ಷಣ, ಅಪೇಯಪಾನ ಮೊದಲಾದ ವ್ಯಸನಗಳನ್ನು ತೊರೆದು ಧನುಮಾಸವೂ  ಸೇರಿದಂತೆ ೪೮ ದಿನಗಳ ಕಾಲ ಕಠಿಣ ವ್ರತಗೈದು ಹರಿಹರ ಪುತ್ರನ ಕೃಪೆಯನ್ನು  ಸಂಪಾದಿಸಲು ಇದೇ ಕಾಲವನ್ನು ಆಯ್ದುಕೊಂಡಿರಬೇಕು.

ಸಂಗ್ರಹ : 
ಬಿ. ರಾಮಭಟ್, 
ನಿವೃತ್ತ ಉಪತಹಶೀಲ್ದಾರರು ಮತ್ತು ಸಮನ್ವಯಕಾರರು, 
ಹಿಂದೂ ಜನಜಾಗೃತಿ ಸಮಿತಿ, ಸುಳ್ಯ, 
ದೂ.ಕ್ರ : ೯೪೮೧೭೫೬೦೨೮

ಇತರ ಲೇಖನಗಳು
ನಾಗದೇವತೆಗೆ ಪ್ರಿಯವಾದ ಆಶ್ಲೇಷಾ ಬಲಿ
ಸರ್ಪ ಸಂಸ್ಕಾರ
ಬ್ರಹ್ಮಾಂಡ ಶಕ್ತಿಯ ಒಂದು ರೂಪವೇ ಬ್ರಹ್ಮ ಕಲಶ
'ಹಗ್' ಪ್ರಿಯರೇ, ಎಚ್ಚರೆಚ್ಚರ!
ತುಳಸಿಯ ಮಹತ್ವ

No comments:

Post a Comment

Note: only a member of this blog may post a comment.