ಅವಿವಾಹಿತರಿಗೆ ಬ್ರಹ್ಮಚಾರಿ ಮಾರುತಿಯ ಉಪಾಸನೆ ಮಾಡಲು ಏಕೆ ಹೇಳುತ್ತಾರೆ?

ಮಾರುತಿಗೆ ಹರಕೆ ಹೊತ್ತರೆ ನಿಶ್ಚಿತವಾಗಿಯೂ ಫಲಪ್ರಾಪ್ತಿಯಾಗುತ್ತದೆ ಎಂಬ ಶ್ರದ್ಧೆ ಇರುವುದರಿಂದ ಬಹುಮಂದಿ ಸ್ತ್ರೀ-ಪುರುಷರು ವ್ರತ ಅಥವಾ ಹರಕೆಯೆಂದು ಮಾರುತಿಗೆ ಪ್ರತಿದಿನ ನಿರ್ದಿಷ್ಟ ಸಂಖ್ಯೆಯಲ್ಲಿ ಪ್ರದಕ್ಷಿಣೆಗಳನ್ನು ಹಾಕುತ್ತಾರೆ. ಮದುವೆಯಾಗದಿರುವ ಕುಮಾರಿಯರು ಬ್ರಹ್ಮಚಾರಿ ಮಾರುತಿಯ ಉಪಾಸನೆ ಮಾಡಬೇಕೆಂದು ಹೇಳುತ್ತಾರೆ; ಕೆಲವರಿಗೆ ಇದರ ಬಗ್ಗೆ ಆಶ್ಚರ್ಯವೆನಿಸುತ್ತದೆ. ಕುಮಾರಿಯರ ಮನಸ್ಸಿನಲ್ಲಿ ‘ಬಲಿಷ್ಠ ಪುರುಷನು ಪತಿಯಾಗಬೇಕು’ ಎನ್ನುವ ಇಚ್ಛೆಯಿರುತ್ತದೆ ಅದಕ್ಕಾಗಿ ಅವರು ಮಾರುತಿಯ ಉಪಾಸನೆಯನ್ನು ಮಾಡುತ್ತಾರೆ ಎನ್ನುವ ಮನಃಶಾಸ್ತ್ರಾಧಾರಿತ ತಪ್ಪು ಸ್ಪಷ್ಟೀಕರಣವನ್ನು ಕೆಲವರು ನೀಡುತ್ತಾರೆ; ಆದರೆ ಅದರ ನಿಜವಾದ ಕಾರಣಗಳು ಮುಂದಿನಂತಿವೆ.

೧. ಮದುವೆಯಾಗದೇ ಇರುವವರಲ್ಲಿ ಸುಮಾರು ಶೇ. ೩೦ ರಷ್ಟು ವ್ಯಕ್ತಿಗಳಿಗೆ ಭೂತ, ಮಾಟ ಮುಂತಾದ ಕೆಟ್ಟ ಶಕ್ತಿಗಳ ತೊಂದರೆಗಳಿರುವುದರಿಂದ ಮದುವೆಯಾಗುವುದಿಲ್ಲ. ಇಂತಹ ತೊಂದರೆಗಳು ಮಾರುತಿಯ ಉಪಾಸನೆಯಿಂದ ದೂರವಾಗುತ್ತವೆ ಮತ್ತು ಮದುವೆಯಾಗಲು ಸುಲಭವಾಗುತ್ತದೆ. 

(ಶೇ. ೧೦ ರಷ್ಟು ವ್ಯಕ್ತಿಗಳ ಸಂದರ್ಭದಲ್ಲಿ ಭಾವಿ ವಧುವಿನಲ್ಲಿ ಅಥವಾ ವರನಲ್ಲಿ ಪರಸ್ಪರರ ಬಗ್ಗೆ ಪೂರೈಸಲಾಗದಂತಹ ಅಪೇಕ್ಷೆಗಳಿರುವುದರಿಂದ ಮದುವೆ ಆಗುವುದಿಲ್ಲ. ಇಂತಹ ಅಪೇಕ್ಷೆಗಳನ್ನು ಕಡಿಮೆ ಮಾಡಿದರೆ ಮದುವೆಯಾಗುತ್ತದೆ. ಶೇ. ೫೦ ರಷ್ಟು ವ್ಯಕ್ತಿಗಳ ಮದುವೆಯು ಪ್ರಾರಬ್ಧದಿಂದ ಆಗುವುದಿಲ್ಲ. ಪ್ರಾರಬ್ಧ ಮಂದ ಅಥವಾ ಮಧ್ಯಮವಾಗಿದ್ದರೆ ಕುಲದೇವತೆಯ ಉಪಾಸನೆಯಿಂದ ಅಡಚಣೆಗಳು ದೂರವಾಗಿ ಮದುವೆಯಾಗುವ ಸಾಧ್ಯತೆ ಇರುತ್ತದೆ. ಪ್ರಾರಬ್ಧವು ತೀವ್ರವಾಗಿದ್ದಲ್ಲಿ ಸಂತರ ಕೃಪೆ ಇದ್ದರೆ ಮಾತ್ರ ಮದುವೆಯಾಗುತ್ತದೆ. ಉಳಿದ ಶೇ. ೧೦ ರಷ್ಟು ವ್ಯಕ್ತಿಗಳ ಮದುವೆಯಾಗದಿರಲು ಇತರ ಆಧ್ಯಾತ್ಮಿಕ ಕಾರಣಗಳಿರುತ್ತವೆ. ಅವುಗಳಿಗಾಗಿ ಆಯಾ ಕಾರಣಗಳಿಗನುಸಾರ ಪರಿಹಾರೋಪಾಯ ಮಾಡಬೇಕಾಗುತ್ತದೆ.)

೨. ಅತ್ಯುಚ್ಚ ಮಟ್ಟದ ದೇವತೆಗಳಲ್ಲಿ ಬ್ರಹ್ಮಚಾರಿ ಅಥವಾ ವಿವಾಹಿತ ಹೀಗೆ ವ್ಯತ್ಯಾಸವಿರುವುದಿಲ್ಲ. ಎಲ್ಲರ ಜನ್ಮವೂ ಸಂಕಲ್ಪದಿಂದಲೇ, ಅಂದರೆ ‘ಅಯೋನಿ ಸಂಭವ’ವಾಗಿರುವುದರಿಂದ ಅವರಲ್ಲಿ ಸ್ತ್ರೀ ಅಥವಾ ಪುರುಷ ಎನ್ನುವ ಲಿಂಗಭೇದವಿರುವುದಿಲ್ಲ. ಮನುಷ್ಯರು ಈ ರೀತಿಯ ಭೇದಗಳನ್ನು ಮಾಡಿರುತ್ತಾರೆ. ಸ್ತ್ರೀ ದೇವತೆ ಎಂದರೆ ದೇವರ ಶಕ್ತಿಯೇ ಆಗಿದೆ. 

No comments:

Post a Comment

Note: only a member of this blog may post a comment.