ವಾಸುದೇವ ಬಳವಂತ ಫಡಕೆ

ಶ್ರೇಷ್ಠ ಕ್ರಾಂತಿಕಾರಿ ವಾಸುದೇವ ಬಳವಂತ ಫಡಕೆ !

ದೇಶದ ಸ್ವಾತಂತ್ರ್ಯಕ್ಕಾಗಿ ವೈಯಕ್ತಿಕ ಸಾಮರ್ಥ್ಯದ ಪರಾಕಾಷ್ಠೆಯನ್ನು ತೋರಿಸಿದ, ರಹಸ್ಯ ಸಂಘಟನೆಯನ್ನು ಕಟ್ಟಿದ, ಸ್ವಾತಂತ್ರ್ಯಕ್ಕಾಗಿ ಭಾಷಣಗಳಿಂದ ಜನಜಾಗೃತಿಯ ಸೆಳೆತವನ್ನುಂಟು ಮಾಡಿದ, ಶಸ್ತ್ರಬಲದಿಂದ ವಿದೇಶೀ ರಾಜ್ಯಭಾರವನ್ನೇ ನಡುಗಿಸಿದ, ಭಾರತೀಯ ದಂಡಸಂಹಿತೆಯ ರಾಜದ್ರೋಹ ಮತ್ತು ಸರಕಾರದ ವಿರುದ್ದ ಬಂಡಾಯ ಎಂಬ ಕಲಂನಡಿಯಲ್ಲಿ ಆರೋಪವನ್ನು ಹೊರಿಸಲಾಗಿದ್ದ ಹಾಗೂ ಇಂತಹ ವೈಶಿಷ್ಯ್ಟಗಳಿದ್ದ ಕ್ರಾಂತಿಕಾರರ ನಡುವೆ ಶ್ರೇಷ್ಠರೆಂದು ಪರಿಗಣಿಸಲ್ಪಟ್ಟ ವಾಸುದೇವ ಬಲವಂತ ಫಡಕೆಯವರು ನವೆಂಬರ ೪, ೧೮೪೫ ರಲ್ಲಿ ರಾಯಗಡ ಜಿಲ್ಲೆಯ ಶಿರಢೋಣ ಎಂಬ ಊರಿನಲ್ಲಿ ಜನಿಸಿದರು.

೧೮೫೭ರ ಸ್ವಾತಂತ್ರ್ಯ ಸಮರದಲ್ಲಿ ರಾಣಿ ಲಕ್ಷ್ಮೀ ಬಾಯಿ, ತಾತ್ಯಾ ಟೋಪೆಯವರು ತೋರಿಸಿದಂತಹ ಪರಾಕ್ರಮವನ್ನು ಕೇಳಿದಾಗ ಅವರ ಮನಸ್ಸು ಪ್ರಫುಲ್ಲಿತವಾಗುತ್ತಿತ್ತು ಮತ್ತು ಇಂತಹ ಹೋರಾಟವನ್ನು ತಾನೂ ಮಾಡಬಹುದೇನು ಎಂಬ ಪ್ರಶ್ನೆಯು ಅವರ ಬಾಲಮನಸ್ಸಿನಲ್ಲಿ ಮೂಡುತ್ತಿತ್ತು. ಕಾಲಕಳೆದಂತೆ ಇಂತಹ ಹೋರಾಟವನ್ನು ಪ್ರಾರಂಭಿಸುವ ಜವಾಬ್ದಾರಿಯನ್ನು ವಾಸುದೇವರಾಯರ ಕೈಗೊಪ್ಪಿಸಲಾಯಿತು. ೧೮೭೬ರಲ್ಲಿ ಮಹಾರಾಷ್ಟ್ರದಲ್ಲಿ ಭೀಕರ ಬರಗಾಲ ಉಂಟಾದ ಸಮಯದಲ್ಲಿ ಬ್ರಿಟಿಷ್ ಸರಕಾರವು ಉಪವಾಸ ಬಿದ್ದ ರೈತರನ್ನು ದುರ್ಲಕ್ಷ್ಯ ಮಾಡುವುದನ್ನು ಅವರು ನೋಡಿದರು. ಆ ಕಾಲದಲ್ಲಿ ಸೇನಾಸಾಮಾಗ್ರಿ ಕಾರ್ಯಾಲಯದ ತಮ್ಮ ನೌಕರಿಗೆ ದೀರ್ಘಕಾಲೀನ ರಜೆಯನ್ನು ಹಾಕಿ ಅವರು ಇಂದೂರು, ನಾಗಪುರ, ಬಡೋದಾ, ನಾಸಿಕ, ಕೊಲ್ಹಾಪುರ, ಸಾಂಗ್ಲಿ ಮುಂತಾದ ಸ್ಥಳಗಳಲ್ಲಿದ್ದ ದೇಶಬಾಂಧವರ ದುಃಸ್ಥಿತಿಯನ್ನು ಅನುಭವಿಸಿದರು. ಇದರಿಂದಲೇ ಅವರ ಹೆಜ್ಜೆಗಳು ಸಶಸ್ತ್ರ ಕ್ರಾಂತಿಯ ಮಾರ್ಗದೆಡೆಗೆ ಹೊರಳಿದವು. ತಮ್ಮ ಪತ್ನಿಯನ್ನು ಅವರ ಮಾವನವರ ಬಳಿಗೆ ಕಳುಹಿಸಿದರು. ಆಂಗ್ಲ ರಾಜ್ಯವನ್ನು ಹೇಗೆ ನಾಶಗೊಳಿಸುವುದು ಎನ್ನುವ ಬಗ್ಗೆ ಪುಣೆಯ ಸುತ್ತಮುತ್ತಲಿನ ಪರಿಸರದಲ್ಲಿ ಅವರು ಭಾಷಣ ನೀಡತೊಡಗಿದರು. ಅವರು ಮಹಾರ್, ಮಾಂಗ, ರಾಮೋಶಿ, ಭಿಲ್ಲ, ಕೋಳಿ ಮುಂತಾದ ಜಾತಿಯವರನ್ನೆಲ್ಲ ಒಟ್ಟು ಸೇರಿಸಿ ಒಂದು ಸೈನ್ಯವನ್ನು ಸಜ್ಜುಗೊಳಿಸಿದರು.

ದೇಶವನ್ನು ಸ್ವತಂತ್ರಗೊಳಿಸಲು ಅವರು ಸಾಹುಕಾರರಿಂದ ಹಣವನ್ನು ಕೇಳತೊಡಗಿದರು. ಧನವು ಈ ರೀತಿಯ ಬೇಡಿಕೆಯಿಂದ ಸಿಗುವುದಿಲ್ಲ ಎಂದು ತಿಳಿದಾಗ ತಮ್ಮ ಸೇನೆಯ ಸಹಾಯದಿಂದ ಅವರು ಅನೇಕ ಊರುಗಳಲ್ಲಿದ್ದ ಜಮೀನುದಾರರ, ಸಾಹುಕಾರರ ಮೇಲೆ ದಾಳಿ ನಡೆಸಿ ಧನವನ್ನು ಪಡೆದರು. ಆ ಮೊತ್ತಕ್ಕೆ ವಚನ ಚೀಟಿಯನ್ನು (ಪುನಃ ಪಾವತಿಸುವ, ಸಾಲ ತೀರಿಸುವ ವಚನ) ಅವರು ಬರೆದು ಕೊಟ್ಟರು.

ವಾಸುದೇವರಾಯರ ಬಂಡಾಯದಿಂದ ಬ್ರಿಟಿಷ ಸರಕಾರವು ಬೇಸತ್ತು ಹೋಯಿತು. ಸರಕಾರವು ಅವರನ್ನು ಹಿಡಿದುಕೊಟ್ಟವರಿಗೆ ನಾಲ್ಕು ಸಾವಿರ ರೂಪಾಯಿಗಳ ಬಹುಮಾನವನ್ನು ಘೋಷಿಸಿತು. ವಾಸುದೇವರಾಯರು ಅದಕ್ಕಿಂತಲೂ ದೊಡ್ಡ ಮೊತ್ತದ ಬಹುಮಾನವನ್ನು ಗವರ್ನರ್ ಮತ್ತು ಜಿಲ್ಲಾಧಿಕಾರಿಗಳ ತಲೆಗೆ ಘೋಷಿಸಿದರು.

ವಾಸುದೇವರಾಯರ ಬಂಡಾಯವನ್ನು ಹತ್ತಿಕ್ಕಲು ೧೮೦೦ ಸೈನಿಕರನ್ನು ಆಯೋಜಿಸಲಾಗಿತ್ತು. ಆದರೆ ಅದರಿಂದೇನೂ ಉಪಯೋಗವಾಗುತ್ತಿರಲಿಲ್ಲ. ಇದೇ ಸಮಯದಲ್ಲಿ ದುರ್ದೈವವಶಾತ್ ಒಬ್ಬ ಪರಿಚಿತ ಸ್ತ್ರೀಯು ವಾಸುದೇವರಾಯರನ್ನು ಗಾಣಗಾಪುರದಲ್ಲಿ ನೋಡಿದ ಬಗ್ಗೆ ಪುಣೆಯ ಒಂದು ದೇವಸ್ಥಾನದಲ್ಲಿ ಇನ್ನೊಬ್ಬ ಹೆಂಗಸಿಗೆ ತಿಳಿಸಿದಳು. ಅದನ್ನು ಕೇಳಿದ ಒಬ್ಬ ಜಮೀನುದಾರನ ಹೆಂಡತಿಯು ತನ್ನ ಪತಿಗೆ ವಾಸುದೇವರಾಯರ ಸ್ಥಳ ವಿಳಾಸವನ್ನು ಹೇಳಿದಳು. ಈ ಸುದ್ದಿಯು ಅವರು ಹಿಡಿಯಲು ನೇಮಿಸಲ್ಪಟ್ಟಿದ್ದ ಮೇಜರ್ ಡೆನಿಯಲ್‌ಗೆ ತಲುಪಿತು. ಅವರು ಜುಲೈ ೨೦ರಂದು ತಡರಾತ್ರಿಯಂದು ಒಂದು ದೇವಸ್ಥಾನದಲ್ಲಿ ಮಲಗಿದ್ದ ವಾಸುದೇವರಾಯರನ್ನು ಬಂಧಿಸಿದರು. ನವಂಬರ ತಿಂಗಳಿನಲ್ಲಿ ಅವರಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಯಿತು. ಜನವರಿ ೯, ೧೮೮೦ ರಂದು ಅವರನ್ನು ಏಡನ್‌ನ ಸೆರೆಮನೆಗೆ ತಳ್ಳಲಾಯಿತು.

ಈ ಕಾರಾಗೃಹವಾಸದಲ್ಲಿ ಅವರ ಸ್ಥಿತಿಯು ಚಿಂತಾಜನಕವಾಯಿತು. ಆದರೂ ಅಕ್ಟೋಬರ ೧೨, ೧೮೮೦ರಂದು ಬೆಳಗ್ಗೆ ಕೈಕಾಲುಗಳಿಗೆ ತೋಡಿಸಿದ್ದ ಬೇಡಿಗಳನ್ನು ಕಿತ್ತೊಗೆದು ಕೊಠಡಿಯ ಬೀಗವನ್ನು ಮುರಿದು ಸೆರೆಮನೆಯ ಗೋಡೆಯಿಂದ ಜಿಗಿದು ಅವರು ೧೨ ಮೈಲುಗಳಷ್ಟು ದೂರ ಓಡುತ್ತಾ ಹೋದರು. ಮರುದಿನ ಸಾಯಂಕಾಲ ಅವರನ್ನು ಮತೊಮ್ಮೆ ಬಂಧಿಸಲಾಯಿತು. ಅನಂತರದ ಎರಡು ವರ್ಷಗಳಲ್ಲಿ ಅವರಿಗೆ ಎಷ್ಟೊಂದು ಚಿತ್ರಹಿಂಸೆ ನೀಡಲಾಯಿತು ಎಂದರೆ ಕಟ್ಟುಮಸ್ತಾದ ಶರೀರವು ಸೊರಗಿಹೋಯಿತು. ಕೊನೆಗೆ ಫೆಬ್ರವರಿ ೧೭, ೧೮೮೩ ರಂದು ಆ ಶ್ರೇಷ್ಠಕ್ರಾಂತಿಕಾರನು ಹಿಂದೂಸ್ಥಾನದ ಸ್ವಾತಂತ್ರ್ಯ ಹೋರಾಟದಲ್ಲಿ ಆಹುತಿಯಾದನು.

ವಾಸುದೇವ ಬಲವಂತ ಫಡಕೆಯವರು ಹಚ್ಚಿದ ಈ ರಾಷ್ಟ್ರಯಜ್ಞದಿಂದಲೇ ಹಿಂದೂಸ್ಥಾನದ ರಾಜ್ಯಕ್ರಾಂತಿಯ ಜ್ವಾಲೆಯು ಮುಂದೆ ಧಗಧಗಿಸಿತು.

ಆಧಾರ : ಬಾಲಸಂಸ್ಕಾರ ಸಂಕೇತಸ್ಥಳ - http://balsanskar.com/kannada/lekh/98.html

1 comment:

Note: only a member of this blog may post a comment.