ಮಾನಸಪೂಜೆ


‘ದೇವರ ಕುರಿತು ಶ್ರದ್ಧಾಯುಕ್ತ ಅಂತಃಕರಣದಿಂದ ವಿಧಿವತ್ತಾಗಿ ಮಾಡಿದ ಉಪಚಾರಗಳ ಸಮರ್ಪಣೆಯೆಂದರೆ ಪೂಜೆ’, ಹೀಗೆ ‘ಶ್ರೀಮದ್ಭಾಗವತ’ದಲ್ಲಿ ಪೂಜೆಯ ವ್ಯಾಖ್ಯೆಯನ್ನು ಮಾಡಲಾಗಿದೆ. ದೇವರ ಪ್ರತಿಮೆಗೆ ಉಪಚಾರಗಳ ವಿಧಿವತ್ ಸಮರ್ಪಣೆ ಮಾಡುವುದೆಂದರೆ ಕರ್ಮಕಾಂಡದಲ್ಲಿ ಬರುವ ಸ್ಥೂಲದಲ್ಲಿನ ಪೂಜೆಯಾಗಿದೆ. ಆಧ್ಯಾತ್ಮಿಕ ಸಾಧನೆಯ ದೃಷ್ಟಿಯಿಂದ ಸ್ಥೂಲದಲ್ಲಿ ಮಾಡುವ ಪೂಜೆಯು ಪ್ರಾಥಮಿಕ ಹಂತದ್ದಾಗಿದ್ದು ಅನಂತರ ಮನಸ್ಸಿನ ಸ್ತರದಲ್ಲಿ ಉಪಾಸನೆಯು ಆರಂಭವಾಗುತ್ತದೆ. ಈ ಹಂತ ತಲುಪಲು ಸುಲಭವಾದ ಸಾಧನವೆಂದರೆ ಮಾನಸಪೂಜೆ! ಮಾನಸಪೂಜೆಯಲ್ಲಿ ಸ್ಥೂಲದಲ್ಲಿ ಮಾಡುವ ಪೂಜೆಯ ವಿಧಿಗಳನ್ನು ಮಾನಸಿಕವಾಗಿ ಮಾಡುವುದಿರುತ್ತದೆ.

ಮಾನಸಪೂಜೆಯ ಲಾಭ

ಮಾನಸಪೂಜೆಯಲ್ಲಿ ನಮ್ಮ ಮನಸ್ಸಿನಲ್ಲಿ ಮೂಡಿದ ದೇವರ ರೂಪದ ಪೂಜೆ ಮಾಡಲು ಸಾಧ್ಯವಾಗುತ್ತದೆ. ಈ ಪೂಜೆಯ ಒಂದು ಲಾಭವೆಂದರೆ ಸ್ಥಳ, ಉಪಕರಣಗಳು, ಶುಚಿತ್ವ ಇತ್ಯಾದಿ ಕರ್ಮಕಾಂಡದಲ್ಲಿ ಬರುವ ಬಂಧನಗಳು ಇಲ್ಲದಿರುವುದರಿಂದ ಯಾವುದೇ ಸ್ಥಳದಲ್ಲಿ ಇದನ್ನು ಮಾಡಬಹುದು. ಎರಡನೆಯ ಲಾಭವೆಂದರೆ ಮಾನಸಪೂಜೆಯ ಮೂಲಕ ಅಖಿಲ ಬ್ರಹ್ಮಾಂಡದಲ್ಲಿ ಯಾವುದೇ ಅತ್ಯುತ್ತಮವಾದ ವಸ್ತುವನ್ನೂ ದೇವರಿಗೆ ಅರ್ಪಣೆ ಮಾಡಬಹುದು. ಇದಕ್ಕಿಂತಲೂ ಶ್ರೇಷ್ಠವಾದ ಮೂರನೆಯ ಲಾಭವೆಂದರೆ ಎಷ್ಟು ಕಾಲ ನಮ್ಮ ಮಾನಸಪೂಜೆಯು ನಡೆಯುತ್ತಿರುತ್ತದೆಯೋ, ಅಷ್ಟು ಕಾಲ ಆ ದೇವರೊಂದಿಗೆ ನಾವು ಅನುಸಂಧಾನದಲ್ಲಿರಬಹುದು. ಸಾಧಕರಿಗೆ ಆಧ್ಯಾತ್ಮಿಕ ಸಾಧನೆಯಲ್ಲಿ ಭಾವಜಾಗೃತವಾಗಲು ಈ ಮಾನಸಪೂಜೆಯು ತುಂಬಾ ಸಹಾಯಕವಾಗಿದೆ.

No comments:

Post a Comment

Note: only a member of this blog may post a comment.