ಸರ್ವೋಪಕಾರಿಯಾದ ಗೋಮಾತೆ!

ಗೋವಿನ ಮಹತ್ವ, ಉಪಯೋಗ ಇತ್ಯಾದಿಗಳನ್ನು ನಾವು ನೋಡುತ್ತಾ ಹೋದರೆ ಅದಕ್ಕೆ ಕೊನೆಯೇ ಇರುವುದಿಲ್ಲ. ಗೋವಿನ ಉಪಯುಕ್ತತೆಯು ವೈದ್ಯಕೀಯದಲ್ಲಿ, ಆರ್ಥಿಕ ವಿಷಯದಲ್ಲಿ, ಕೃಷಿಯಲ್ಲಿ ಮತ್ತು ವಾತಾವರಣದ ಶುದ್ಧೀಕರಣದಲ್ಲಿ ಹೇಗಿದೆ ಎಂಬ ಬಗ್ಗೆ ಕೆಲವು ಅಂಶಗಳನ್ನು ನೋಡೋಣ.

ವೈದ್ಯಕೀಯ ವಿಷಯದಲ್ಲಿ
ಗೋಮೂತ್ರ, ಗೋಮಯ ಮತ್ತು ವಿಭೂತಿಗಳಲ್ಲಿ ಲಕ್ಷ್ಮೀಯು ವಾಸಿಸುತ್ತಾಳೆ ಎಂದು ಹೇಳುತ್ತಾರೆ. ಗೋಮೂತ್ರವು ರೋಗನಿವಾರಕ ಮತ್ತು ಆರೋಗ್ಯವರ್ಧಕವಾಗಿದೆ. ಗೋಮೂತ್ರವು ಗಂಗಾಜಲಕ್ಕೆ ಸಮಾನವಾಗಿದೆ. ಗೋಮಯವನ್ನು ಒಣಗಿಸಿ ತಟ್ಟಿ ಅಗ್ನಿಗೆ ಅರ್ಪಿಸಿದಾಗ ವಿಭೂತಿಯಾಗುತ್ತದೆ. ಇವುಗಳೆಲ್ಲವೂ ಪರಮಪವಿತ್ರ ಮಾತ್ರವಲ್ಲದೆ ಸ್ಥೂಲ ಮತ್ತು ಸೂಕ್ಷ್ಮ ದೇಹಗಳ ಶುದ್ಧೀಕರಣ ಮಾಡುತ್ತವೆ.

ಗೋಮೂತ್ರ: ಗೋಮೂತ್ರದಲ್ಲಿ ಅದ್ಭುತವಾದ ಔಷಧೀಯ ಗುಣಗಳಿವೆ. ಸುಮಾರು ೧೪೮ರೋಗಗಳಿಗೆ ಗೋಮೂತ್ರವು ಔಷಧಿಯಂತೆ ಕೆಲಸ ಮಾಡುತ್ತದೆ. ಕ್ಯಾನ್ಸರ್‌ನಿಂದ ಪ್ರಾರಂಭಿಸಿ ಅಜೀರ್ಣ, ಹೊಟ್ಟೆ ನೋವು, ಚರ್ಮ ರೋಗಗಳವರೆಗೆ ಗೋಮೂತ್ರದಿಂದ ವಾಸಿಯಾಗುವ ರೋಗಗಳ ಪಟ್ಟಿ ಬೆಳೆಯುತ್ತದೆ. ಗೋಮೂತ್ರವು ಕ್ಯಾನ್ಸರ್ ವಿರುದ್ಧ ಪರಿಣಾಮಕಾರಿ ಎಂಬ ಸತ್ಯವು ಇತ್ತೀಚೆಗೆ ಪ್ರಚಾರಕ್ಕೆ ಬಂದಿರುವುದಾದರೂ ಇದರ ಉಲ್ಲೇಖವು ವೇದಗಳಲ್ಲಿ ಬಂದಿದೆ. ಶರೀರದ ಮೇಲೆ ಗಂಟುಗಳು ಆದಲ್ಲಿ ಗೋಮೂತ್ರದ ನೊರೆಯಿಂದ ತೇವ ಭರಿತವಾಗಿಸುವುದು, ಗೋಮೂತ್ರವನ್ನು ಅದರ ಮೇಲೆ ಧಾರೆಯಂತೆ ಸುರಿಯುವುದು, ಗೋಮೂತ್ರದಿಂದ ತೊಳೆಯುವುದು ಮೊದಲಾದ ಚಿಕಿತ್ಸಾ ವಿಧಾನವನ್ನು ‘ಅಥರ್ವವೇದ’ದಲ್ಲಿ ಹೇಳಲಾಗಿದೆ. ರಸೌಷಧಿಗಳ ಶೋಧನೆಗೂ ಗೋಮೂತ್ರವನ್ನು ಬಳಸುತ್ತಾರೆ.

ಗೋಮಯ: ಹಸುವಿನ ಸೆಗಣಿಯು ಕ್ರಿಮಿನಾಶಕ ಗುಣಗಳನ್ನು ಹೊಂದಿರುವುದರಿಂದ ಮೊದಲು ಜನರು ನೆಲವನ್ನು ಸಾರಿಸಲು ಉಪಯೋಗಿಸುತ್ತಿದ್ದರು. ಈಗಲೂ ಹಳ್ಳಿಗಳಲ್ಲಿ ಜನರು ಇದನ್ನು ಬಳಸುತ್ತಾರೆ. ಬೆರಣಿಯ ಭಸ್ಮವು ಚಳಿ, ಜ್ವರ ಇತ್ಯಾದಿಗಳಲ್ಲಿ ಮೈ ಶಾಖವನ್ನು ಕಾಪಾಡಲು ಸಹಾಯ ಮಾಡುತ್ತದೆ.

ಗೋಕ್ಷೀರ (ಹಸುವಿನ ಹಾಲು): ಎಳೆಯ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಉಪಯುಕ್ತ. ಹಾಲು ವಾತ, ಪಿತ್ಥ, ಕಫಗಳೆಂಬ ಮೂರು ದೋಷಗಳನ್ನು ಹೋಗಲಾಡಿಸುತ್ತದೆ.

ದಧಿ (ಮೊಸರು): ಹಸುವಿನ ಮೊಸರು ಶರೀರಕ್ಕೆ ಬಲಕರ. ವಾತ ಹರವೂ ದೇಹಪುಷ್ಟಿಕರವೂ ಆಗಿದೆ. ಮೊಸರಿಗೆ ಸಕ್ಕರೆ ಹಾಕಿ ಸೇವಿಸಿದರೆ ರಕ್ತದೋಷ ಹಾಗೂ ಪಿತ್ತದೋಷಗಳನ್ನು ಹೋಗಲಾಡಿಸಿ ಮೈ ಉರಿಯನ್ನು ಕಡಿಮೆ ಮಾಡುತ್ತದೆ.

ನವನೀತ (ಬೆಣ್ಣೆ): ತದ್‌ಹಿತಂ ಬಾಲಕೇ ವೃದ್ಧೇ ವಿಶೇಷಾದಮೃತಂ ಶಿಶೋಃ| ತಾಜಾ ಬೆಣ್ಣೆಯು ಮಕ್ಕಳಿಗೂ ಮತ್ತು ವೃದ್ಧರಿಗೂ ಹಿತವಾಗಿರುತ್ತದೆ. ಎಳೆ ಮಕ್ಕಳಿಗೆ ಅಮೃತದಂತೆ. ಅಗ್ನಿವರ್ಧಕ, ವಾತಪಿತ್ತಹರ, ಧಾತುಕ್ಷಯ, ಅತಿಸಾರ ಹಾಗೂ ದಮ್ಮುಗಳನ್ನು ನಿವಾರಿಸುತ್ತದೆ.

ಘೃತ (ತುಪ್ಪ): ತುಪ್ಪವು ವಾತಪಿತ್ತಹರ, ವಿಷಹರ, ಕಣ್ಣಿನ ರೋಗಗಳನ್ನು ಹೋಗಲಾಡಿಸಿ ದೃಷ್ಟಿಯನ್ನು ಚುರುಕುಗೊಳಿಸುತ್ತದೆ. ಖಾಯಿಲೆಗಳಲ್ಲಿ ಅರಿಶಿನ ಹಾಕಿ ಕಾಯಿಸಿದ ತುಪ್ಪವು ಉಪಯುಕ್ತವಾಗಿದೆ.

ಗೋರೋಜನ: ಗೋವಿನ ಪಿತ್ತಕೋಶದಲ್ಲಿ ಉತ್ಪತ್ತಿಯಾಗುವ ಗೋರೋಜನವು ಸರ್ವಾಂಗೀಣ ಆರೋಗ್ಯವರ್ಧಕ. ಇದು ದುಷ್ಟಶಕ್ತಿಗಳ ತೊಂದರೆಯನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ.

ಗೊರಸು: ಹಸುವಿನ ಗೊರಸು ಧೂಪಗಳಲ್ಲಿ ಕ್ರಿಮಿಹರ ಮತ್ತು ರಕ್ಷೋಘ್ನವಾಗಿ ಬಳಸಲ್ಪಡುತ್ತದೆ.

ಆರ್ಥಿಕ ವಿಷಯದಲ್ಲಿ
ನಮ್ಮದು ಕೃಷಿ ಪ್ರಧಾನ ದೇಶ. ಬಹುತೇಕ ಕೃಷಿಕರು ಕೃಷಿಗಾಗಿ ಜಾನುವಾರು ಗಳನ್ನು ಅವಲಂಬಿಸಿದ್ದಾರೆ. ಭಾರತದಲ್ಲಿ ಕೃಷಿ ಚಟುವಟಿಕೆಗಳಿಗೆ ಉಪಯೋಗಿಸಲ್ಪ ಡುವ ಜಾನುವಾರುಗಳು ಸುಮಾರು ೨೭,೦೦೦ ಮೆಗಾವಾಟ್ ಶಕ್ತಿಯನ್ನು ಉತ್ಪಾದಿಸುತ್ತವೆ. ಈ ಕೆಲಸಕ್ಕೆ ಟ್ರಾಕ್ಟರ್ ಉಪಯೋಗಿಸುವುದರಿಂದ ಸುಮಾರು ೨೪ ಮಿಲಿಯನ್ ಟನ್ ಡೀಸೆಲ್‌ನ್ನು ಆಮದು ಮಾಡಿಕೊಳ್ಳಬೇಕಾಗುತ್ತದೆ. ಇದರ ಬೆಲೆ ಸುಮಾರು ೨೨,೦೦೦ ಕೋಟಿಗಳು. ನಮ್ಮ ರಾಜ್ಯದಲ್ಲಿ ಪ್ರತಿ ಒಂದು ಸಾವಿರ ಹೆಕ್ಟೇರ್ ಭೂಮಿಯಲ್ಲಿ ೨.೭೯ ಟ್ರಾಕ್ಟರ್, ೦.೯೪೭ ಟಿಲ್ಲರ್ ಮತ್ತು ೩೫೯ ಜಾನುವಾರುಗಳನ್ನು ಕೃಷಿಗಾಗಿ ಬಳಸುತ್ತಿದ್ದೇವೆ. ಇನ್ನೂ ಪಕ್ಕಾ ರಸ್ತೆಗಳು ಇಲ್ಲದಿರುವುದರಿಂದ ಸಾರಿಗೆ ಮತ್ತು ಸಾಗಾಟಗಳಲ್ಲಿ ನಮ್ಮ ದೇಶದ ೮೪ ದಶಲಕ್ಷ ಜಾನುವಾರುಗಳು ಭಾಗಿಯಾಗುತ್ತಿವೆ. ಅತ್ಯಂತ ಉಪಯುಕ್ತವಾದ ನೈಸರ್ಗಿಕ ಗೊಬ್ಬರದ ಉತ್ಪತ್ತಿಗೆ ಗೋವಂಶವೇ ಕಾರಣ. ೨೩೬ಮಿಲಿಯನ್ ಟನ್ ನೈಸರ್ಗಿಕ ಗೊಬ್ಬರವನ್ನು ನಮ್ಮ ಜಾನುವಾರುಗಳು ನೀಡುತ್ತವೆ.
ಹಳ್ಳಿಗಳಲ್ಲಿ ಕ್ಷೀರಕ್ರಾಂತಿಯನ್ನು ತರಲು ಮತ್ತು ಜನರ ಆರ್ಥಿಕ ಸ್ವಾವಲಂಬನೆಗಾಗಿ ಹೈನುಗಾರಿಕೆಯನ್ನು ಅಭಿವೃದ್ಧಿ ಪಡಿಸುವ ಯಾವುದೇ ಯೋಜನೆಗೆ ಗೋವು ಅವಕಾಶಗಳನ್ನು ಒದಗಿಸಿ ಕೊಟ್ಟಿದ್ದಾಳೆ. (ಆಧಾರ: ‘ಧರ್ಮಭಾರತಿ’)

ಗೋವಿನಿಂದ ವಾತಾವರಣದ ಶುದ್ಧಿಯಾಗುವುದು
ಗೋವಿನಿಂದ ಪ್ರತ್ಯಕ್ಷ ಹಾಲು, ಗೊಬ್ಬರ, ಉಳುಮೆ, ಸಾಕಾಣಿಕೆಯಲ್ಲದೇ ಇನ್ನಿತರ ಉಪಯುಕ್ತತೆಯೂ ಇರುತ್ತದೆ. ಅದೇನೆಂದರೆ ಒಂದು ಗೋವು ಸಾಮಾನ್ಯವಾಗಿ ಐದು ವರ್ಷ ತುಂಬಿದಾಗ ಫ್ರೌಢವಾಗುತ್ತದೆ. ಅಲ್ಲಿಂದ ಅದು ಸಹಜವಾಗಿ ತನ್ನ ಮೈಯಿಂದ ಹೊರಡಿಸುವ ಗ್ರಂಥಿ ಸ್ರಾವದಿಂದಾಗಿ ವಾತಾವರಣ ಶುದ್ಧಿಗೆ ಸಹಕಾರಿಯಾಗುತ್ತದೆ. ಅದು ಆ ಹಸುವು ಸಾಯುವವರೆಗೂ ಇರುತ್ತದೆ. ಹಾಗಾಗಿ ಹಸುವು ಮುದಿಯಾಯಿತು ಎಂದು ಅದರ ಪೋಷಣೆಯನ್ನು ಬಿಡಬೇಡಿರಿ. ಅದರ ಹಾಲಿನ ಉತ್ಪನ್ನಕ್ಕಿಂತ ಅದರ ಗ್ರಂಥಿಯ ಶ್ರೇಷ್ಠತೆ ಹೆಚ್ಚು. ಆ ಸ್ರಾವವು ಅದರ ಸಮೀಪದಲ್ಲಿ ವಾಸಿಸುವ ಜನರ ಆರೋಗ್ಯವನ್ನು ಕಾಪಾಡುತ್ತದೆ, ರಕ್ಷಣೆ ಒದಗಿಸುತ್ತದೆ. ಅಲ್ಲದೇ ದೂಷಿತ ವಾತಾವರಣವನ್ನು ಶುದ್ಧಿ ಮಾಡುತ್ತದೆ. ಹಸುವು ವಯಸ್ಸಾದಷ್ಟು ಅದು ಹೆಚ್ಚು ಪರಿಣಾಮಕಾರಿಯಾಗಿ ಗ್ರಂಥಿ ಸ್ರಾವವನ್ನು ಹೊರಸೂಸಬಲ್ಲದು.

ಗೋವಿನ ಉತ್ಪನ್ನಗಳ ಇತರ ಲಾಭಗಳು
ಸೌಂದರ್ಯವರ್ಧಕವಾಗಿ ಬಳಕೆ: ದನದ ಸಗಣಿಯನ್ನು ಲಾವಂಚದ ಬೇರಿನೊಂದಿಗೆ ಬೆರೆಸಿ ಬೆರಣಿಯನ್ನು ತಟ್ಟಿ ಒಣಗಿಸಿ ಸುಟ್ಟು ಪುಡಿ ಮಾಡಿ ಗಾಳಿಸಿ, ಪುನಃ ಗೋಮೂತ್ರದಲ್ಲಿ ಕಲಸಿ ಉಂಡೆ ಮಾಡಿ ಏಳು ಬಾರಿ ಸುಟ್ಟು ಪುಡಿ ಮಾಡಿ ಸೂಕ್ಷ್ಮ ಕಣವಾಗಿ ಪರಿವರ್ತಿಸಿ ಪರಿಮಳ ದ್ರವ್ಯ ಮಿಶ್ರಣ ಮಾಡಿಟ್ಟುಕೊಂಡರೆ, ಉತ್ತಮವಾದ ಮುಖಕ್ಕೆ ಹಚ್ಚುವ ಪೌಡರ್ ಸುಲಭ ಬೆಲೆಯಲ್ಲಿ ಲಭ್ಯ. ಅದೇ ಪುಡಿಯನ್ನು ಸ್ವಲ್ಪ ನಿಂಬೆರಸ, ಸೌತೇಕಾಯಿ ರಸ ಬೆರೆಸಿ ಮೌಕ್ತಿಕ ಭಸ್ಮದೊಂದಿಗೆ ಕಲಸಿಟ್ಟುಕೊಂಡರೆ ಕ್ರೀಮ್. ಇದು ಮುಖದ, ಮೈಯ ಯಾವುದೇ ಕಲೆಯನ್ನು ಮಾಸುವಂತೆ ಮಾಡುತ್ತದೆ ಜೊತೆಗೆ ಹೊಳಪು, ಕಾಂತಿ, ತೇಜಸ್ಸು ಉಂಟು ಮಾಡುತ್ತದೆ. ಚಳಿಗಾಲದಲ್ಲಿ ಮುಖ ಕೈ ಕಾಲು ಒಡೆಯುವವರಿಗೆ ಈ ಕ್ರೀಮ್ ತುಂಬಾ ಉತ್ತಮ ಮತ್ತು ಇವೆಲ್ಲಾ ತುಂಬಾ ಸುಲಭ ಸಾಧ್ಯವಾದ ಖರ್ಚಿಲ್ಲದ ನಿರಪಾಯಕಾರಿ ಔಷಧಗಳು.

ಇತರ: ಗೋವಿನ ಕಿವಿಯಲ್ಲಿ ಉಂಟಾಗುವ ಒಂದು ರೀತಿಯ ಗ್ರಂಥಿ ಸ್ರಾವ ಉತ್ತಮ ವಾತಾವರಣ ಶುದ್ಧಿಗೆ ಕಾರಕ. ಅದರ ಡುಬ್ಬದಿಂದ ಅಂದರೆ ಭುಜ ಭಾಗದಿಂದಲೂ ಸದಾ ಬೆವರುತ್ತಾ ಬೀಸಿ ಬರುವ ಗಾಳಿಗೆ ಅದನ್ನು ಸೇರಿಸುತ್ತಾ ಇರುತ್ತದೆ. ಇದರಿಂದಾಗಿ ವಾತಾವರಣದಲ್ಲಿ ರುವಂತಹ ಸೂಕ್ಷ್ಮ ವಿಷಾಣುಜೀವಿಗಳು ನಾಶವಾಗುತ್ತವೆ. ಅದರ ಒಟ್ಟು ಮೈಯಿಂದಲೂ ಬೆವರಿನ ಸ್ರಾವವು ಅತ್ಯುತ್ತಮ ಕ್ರಿಮಿನಾಶಕ ಗುಣ ಹೊಂದಿರುತ್ತದೆ.

ಕೆಲ ತುರಿಕೆಗೆ ಕಾರಣವಾಗುವ ಕಜ್ಜಿ ಇತ್ಯಾದಿ ಚರ್ಮರೋಗಗಳಿಗೆ ಗೋಶಾಲೆಯ ಮಣ್ಣು ಅತೀ ಉಪಯುಕ್ತ. ಈ ರೀತಿಯ ಆಯುರ್ವೇದೀಯ ಔಷಧ ಬಳಕೆಯಲ್ಲಿ ಗೋವಿನ ಪಾತ್ರ ಅತೀ ಮಹತ್ತ್ವವಾದದ್ದು. ಅದಕ್ಕೆಲ್ಲಾ ಕಾರಣ ಗೋವಿನಲ್ಲಿ ಸಹಜವಾಗಿ ರೂಪುಗೊಂಡ ಮನುಷ್ಯನ ಮತ್ತು ಗೋವಿನ ಜೀವನ ವಿಧಾನದ ಅವಿನಾಭಾವ ಸಂಬಂಧ. ಮನುಷ್ಯ ಸಹಚರ್ಯಕ್ಕೆ ಅತೀ ಸೂಕ್ತ ಪ್ರಾಣಿಯೆಂದರೆ ಗೋ ಮಾತ್ರ. ಅದರಿಂದಾಗಿ ಹಿಂದೆ ಗೋಸಾಕಣಿಗೆ ವಿಶೇಷ ಮಹತ್ವವನ್ನು ಕೊಟ್ಟಿದ್ದರು.
(ಕೃಪೆ: ಗೋಮಾತೆ ವಿಶ್ವ ಮಾತೆ, ಲೇಖಕರು ಕೆ.ಎಸ್.ನಿತ್ಯಾನಂದ, ಸಿಂಧು ಪ್ರಕಾಶನ, ಕುಂದಾಪುರ.)

(ಸೌಜನ್ಯ - ಸಾಪ್ತಾಹಿಕ ಪತ್ರಿಕೆ "ಸನಾತನ ಪ್ರಭಾತ")

ಸಂಬಂಧಿತ ವಿಷಯಗಳು
Dharma Granth

No comments:

Post a Comment

Note: only a member of this blog may post a comment.