ಅಧ್ಯಾತ್ಮ ಮತ್ತು ಆಧುನಿಕ ಮಾನಸಿಕತೆ

ಇಡೀ ಪ್ರಪಂಚವನ್ನು “ಅಧಿಭೂತ, ಅಧಿದೈವ, ಅಧ್ಯಾತ್ಮ” ಎಂದು ಮೂರು ವಿಧವಾಗಿ ಮೋಕ್ಷಶಾಸ್ತ್ರದಲ್ಲಿ ವಿಂಗಡಿಸಲಾಗಿದೆ. ಅಧಿಭೂತವೆಂದರೆ ನಮಗೆ ತೋರಿಬರುತ್ತಿರುವ ಈ ಪ್ರಪಂಚ, ಇದರ ಅರಿವು, ಅದರಲ್ಲಿನ ಬದಲಾವಣೆಗಳು, ಇತ್ಯಾದಿ. ಇದರಲ್ಲಿಯೇ ಈಗಿನ ಕಾಲದ ವೈಜ್ಞಾನಿಕ, ತಾಂತ್ರಿಕ, ಸಾಮಾಜಿಕ ಬದಲಾವಣೆಗಳ ಅಧ್ಯಯನ, ಪರಿಣಾಮಗಳನ್ನೂ ಸೇರಿಸಬಹುದು. ತಂತ್ರಜ್ಞಾನಯುಗವೆಂದು ಕರೆಯಲ್ಪಡುತ್ತಿರುವ ಈ ಕಾಲದಲ್ಲಿ ಅಧಿಭೂತವೇ ಎಲ್ಲರಿಗೂ ಹೆಚ್ಚಿನ ಅಕ್ಕರೆಯ ವಿಚಾರವಾಗಿದೆ.

ಇನ್ನು ಅಧಿದೈವವೆಂದರೆ ದೇವತೆಗಳು, ಪರಲೋಕ ಮುಂತಾದವುಗಳನ್ನು ಕುರಿತದ್ದು. ಒಂದು ಕಾಲದಲ್ಲಿ ಈಗಿನಂತೆ ಲೌಕಿಕ ವಿಚಾರಗಳಿಗೆ ಮನ್ನಣೆಯೇ ಇಲ್ಲದೆ ಈ ಅಧಿದೈವವೇ ಪ್ರಮುಖವಾಗಿ, ಯಜ್ಞಯಾಗಾದಿಗಳು, ಸ್ವರ್ಗನರಕಗಳ ವಿಚಾರವೇ ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿದ್ದವು. ವೇದೋಕ್ತಕರ್ಮಗಳು ಸರಿಯಾಗಿ ವಿಚಾರಣೆಗೆ ಒಳಪಡದೆ ಅತಿಯಾಗಿ ಆಚರಿಸಲ್ಪಡುತ್ತಿದ್ದವು. ಆದರೆ ಈಚೆಗೆ ಆಗಿರುವ ವೈಜ್ಞಾನಿಕ ಸಂಶೋಧನೆಗಳು, ತಂತ್ರಜ್ಞಾನದ ಆವಿಷ್ಕಾರಗಳಿಂದ ಅತೀಂದ್ರಿಯ ವಿಷಯಗಳಾದ ಪರಲೋಕ ಇತ್ಯಾದಿಗಳ ಬಗೆಗಿನ ನಂಬಿಕೆಗಳು ತೀವ್ರ ಬದಲಾವಣೆಗೆ ಒಳಗಾಗಿವೆ. ಹಾಗಾಗಿ ಇಂದು ಅಧಿದೈವವು ಎಲ್ಲರ ಆದ್ಯತೆಯ ವಿಚಾರವಾಗೇನೂ ಉಳಿದಿಲ್ಲ.

ಆದರೆ ಮೂರನೆಯದಾದ ಅಧ್ಯಾತ್ಮವು ಮಾತ್ರ ಇವೆರಡರಂತೆ ಆಯಾ ದೇಶ, ಕಾಲಗಳ ಮನ್ನಣೆಗೆ ಒಳಪಡದೆ ಸಾರ್ವಕಾಲಿಕವಾದ, ಇಡಿಯ ಜಗತ್ತಿನ ತಿರುಳಾದ, ನಮ್ಮ ಹೃದಯದಲ್ಲಿಯೇ ಸದಾ ಇದ್ದುಕೊಂಡಿರುವ “ಆತ್ಮ” ನನ್ನು ಕುರಿತ ವಿಚಾರವನ್ನು ತಿಳಿಸುತ್ತದೆ. “ಇದು ಅಧಿಭೂತದಂತೆ ಇಂದ್ರಿಯಗಳಿಗೆ ಕಾಣಬರುವುದಿಲ್ಲ. ಅಧಿದೈವದಂತೆ ಕೇವಲ ನಂಬಿಕೆಯ ವಿಷಯವೂ ಅಲ್ಲ. ಈ ಅಧ್ಯಾತ್ಮದಲ್ಲಿ ನಮ್ಮೆಲ್ಲರ ನಿಜವಾದ ಸ್ವರೂಪವನ್ನೇ ತಿಳಿಸಿದೆ. ಇದರ ತಿಳಿವಳಿಕೆಯೇ ಮಾನವನ ಜೀವನದ ಪರಮ ಗುರಿ. ಇದನ್ನು ತಿಳಿದುಕೊಳ್ಳಲು ಕಠಿಣ ತ್ಯಾಗವೂ, ವಿಷಯವೈರಾಗ್ಯವೂ ಅತ್ಯಂತ ಅಗತ್ಯ. ಇದನ್ನು ತಿಳಿದುಕೊಳ್ಳುವುದರಿಂದ ಎಲ್ಲ ಶೋಕಮೋಹಗಳು ಹೋಗಿಬಿಡುತ್ತವೆ. ಆದ್ದರಿಂದ ಇದನ್ನೇ ಎಲ್ಲರೂ ತಿಳಿದುಕೊಳ್ಳಬೇಕು” ಎಂದು ವೇದಗಳು ಹೇಳುತ್ತಿವೆ.

ಅಧ್ಯಾತ್ಮವು ದೇಶಕಾಲಾತೀತವಾದದ್ದೇನೋ ಇರಬಹುದು. ಹಿಂದಿನ ಎಲ್ಲ ಅಸಾಧ್ಯಕಾರ್ಯಗಳನ್ನು ಇಂದು ವಿಜ್ಞಾನ, ತಂತ್ರಜ್ಞಾನಗಳ ಸಹಾಯದಿಂದ ಸಾಧಿಸುತ್ತಾ ಲೌಕಿಕ ಜೀವನವನ್ನು ಸುಖಮಯವಾಗಿ ಮಾಡಿಕೊಳ್ಳುವ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿರುವ ಈ ಕಾಲದಲ್ಲಿ ಇದರ ಅಗತ್ಯವಿದೆಯೇ ? ಎಂದು ಕೆಲವರು ಯೋಚಿಸುವುದುಂಟು.

ಆದರೆ ಈಗಿನ ನಮ್ಮ ಪರಿಸ್ಥಿತಿ ಹೇಗಿದೆ ? ಯುಗಗಳು ದಿನಗಳಾಗಿ, ದಿನಗಳು ಕ್ಷಣಗಳಾಗಿ ಸದಾ ಧನ ಸಂಪಾದನೆಯಲ್ಲಿಯೇ ನಾವೆಲ್ಲರೂ ನಿರತರಾಗಿರುತ್ತೇವೆ. ನಮ್ಮ ಕಷ್ಟಗಳಿಗೆಲ್ಲಾ ದಾರಿದ್ರ್ಯವೇ ಕಾರಣವೆಂದೂ, ಧನದಿಂದ ಎಲ್ಲವೂ ದೊರೆಯುತ್ತದೆಯೆಂದೂ ನಂಬಿ ಅದಕ್ಕಾಗಿ ಅವಿರತ ಪ್ರಯತ್ನಿಸುತ್ತಿರುತ್ತೇವೆ. ಇಷ್ಟಾದರೂ ನಮ್ಮಗಳ ಮನಸ್ಸಿನಲ್ಲಿ ಅಶಾಂತಿಯು ತಾಂಡವವಾಡುತ್ತಿದೆ. ದಶಕಂಠನಾದ ರಾವಣನ ತಲೆಯನ್ನು ಕತ್ತರಿಸಿದಷ್ಟೂ ಮತ್ತೆ ಮತ್ತೆ ಮೂಡಿಬರುತ್ತಿದ್ದಂತೆ, ನಮ್ಮ ಬಯಕೆಗಳು ಪೂರೈಸಿದಷ್ಟೂ ಮನಸ್ಸಿನಲ್ಲಿ ಹೊಸ ಕಾಮನೆಗಳು ಉದಯಿಸುತ್ತಲೇ ಇವೆ. ಹೀಗೆ ಮನಸ್ಸಿನಲ್ಲಿ ಉಂಟಾಗುವ ಕೊನೆಯಿಲ್ಲದ ಕಾಮನೆಗಳ ಪೂರೈಕೆಗಾಗಿ ಬಿಡುವೇ ಇಲ್ಲದೆ ಶರೀರ, ಇಂದ್ರಿಯಗಳನ್ನು ಹಿಂಸಿಸಿ, ದುಡಿದು ದುಡಿದು ಸವೆದು ಹೋಗುವ ಯಂತ್ರಗಳಂತೆ ನಮ್ಮ ತನು, ಮನಗಳನ್ನೂ ಸಹ ವೇಗವಾಗಿ ಆಯಾಸಕ್ಕೆ ಗುರಿಪಡಿಸಿ ಶಾರೀರಿಕವಾಗಿಯೂ, ಮಾನಸಿಕವಾಗಿಯೂ ಬಳಲುತ್ತಾ, ವ್ಯಾಧಿಗಳಿಗೆ ತುತ್ತಾಗುತ್ತಾ ನಿಟ್ಟುಸಿರುಬಿಡುತ್ತಿದ್ದೇವೆ.

ಹಾಗಾದರೆ ಈ ನಮ್ಮ ಕಷ್ಟಗಳಿಗೆ ಪರಿಹಾರವೇ ಇಲ್ಲವೆ ? ನಮ್ಮ ಬಯಕೆಗಳು ಎಂದಿಗಾದರೂ ಸಂಪೂರ್ಣವಾಗಿ ತೀರುತ್ತದೆಯೆ? ಅಥವಾ ತೀರದ ಈ ಬಯಕೆಗಳ ಸಂಕೋಲೆಯಿಂದ ಹೊರಬರುವ ದಾರಿಯೇನಾದರೂ ಇದೆಯೆ? ನಮ್ಮ ಶರೀರ, ಇಂದ್ರಿಯಗಳಿಗೆ ನಾವು ದಾಸರಾಗದೆ, ಅವನ್ನೇ ನಮ್ಮ ಅಡಿಯಾಳನ್ನಾಗಿ ಮಾಡಿಕೊಳ್ಳಲು ಸಾಧ್ಯವೇ? ಎಂದು ಯಾರಾದರೂ ಆಲೋಚನೆ ಮಾಡಿದರೆ ಅಂತಹವರಿಗೆ ಉಪನಿಷತ್ತುಗಳು ನಮ್ಮ ಸ್ವರೂಪದ ಬಗ್ಗೆ ಸರಿಯಾದ ತಿಳಿವಳಿಕೆಯನ್ನು ಹೇಳುವ ಮೂಲಕ ಮಾರ್ಗದರ್ಶನ ಮಾಡುತ್ತವೆ.

ನಾವುಗಳು ತಿಳಿದಿರುವಂತೆ ಈ ಶರೀರ, ಇಂದ್ರಿಯಗಳು ನಿಜವಾಗಿ ನಮ್ಮ ಸ್ವರೂಪವೇನೂ ಅಲ್ಲ. ನಮ್ಮ ಸ್ವರೂಪವಾದ ಆತ್ಮನಿಗೆ ಈ ದೇಹ, ಇಂದ್ರಿಯಾದಿಗಳ ಸಂಬಂಧವು ಸ್ವಲ್ಪವೂ ಇಲ್ಲವೇ ಇಲ್ಲ. ಆದ್ದರಿಂದ ‘ಈ ಶರೀರವು ನಾನು, ಈ ಇಂದ್ರಿಯಗಳು ನನ್ನವು’ ಇಂತಹ ತಪ್ಪು ಕಲ್ಪನೆಯನ್ನು ದೂರಮಾಡಿಕೊಳ್ಳಬೇಕು. ಆಗ ಹುಟ್ಟು, ಸಾವು, ಮುಪ್ಪು, ವ್ಯಾಧಿ ಮುಂತಾದವುಗಳು ಉಂಟಾಗುವ ಈ ಶರೀರದ ಬಗೆಗಿನ ಅಭಿಮಾನವೂ, ಅದರಿಂದಾಗುವ ಕ್ಲೇಶವೂ ದೂರವಾಗಿ ಅಮೃತತ್ವವನ್ನು ಹೊಂದಬಹುದು” ಎಂದು ಉಪನಿಷತ್ತುಗಳು ಸಾರಿ ಹೇಳುತ್ತಿವೆ.

ಅಷ್ಟೇ ಅಲ್ಲದೆ ಅಧ್ಯಾತ್ಮವಿದ್ಯೆಯಲ್ಲಿ ವಿಜ್ಞಾನವು ಇನ್ನೂ ಕಂಡುಕೊಳ್ಳಲು ಸಾಧ್ಯವಾಗದಿರುವ ‘ಈ ಪ್ರಪಂಚದ ಉತ್ಪತ್ತಿ ರಹಸ್ಯ, ಇದರ ಹಿಂದಿನ ಶಕ್ತಿಯ ಸ್ವರೂಪ, ಈ ಶಕ್ತಿಗೂ ನಮಗೂ ಇರುವ ಸಂಬಂಧ’ ಮುಂತಾದ ವಿಚಾರಗಳಲ್ಲಿಯೂ ಮುಂದೆಂದೂ ಬದಲಾಗಲು ಸಾಧ್ಯವಿಲ್ಲದಂತಹ ನಿಜವಾದ ತತ್ವವನ್ನು ತಿಳಿಸಿದೆ. ‘ನಮ್ಮ ಇಂದ್ರಿಯಗಳಿಗೆ ಕಾಣುತ್ತಿರುವ ಈ ಪ್ರಪಂಚವು ನಿಜವಾಗಿಯೂ ಎಂದಿಗೂ ಬದಲಾವಣೆ ಹೊಂದದೆ ಇರುವ ಬ್ರಹ್ಮವೆಂಬ ವಸ್ತುವಾಗಿದೆ. ಈ ಬ್ರಹ್ಮವು ಎಲ್ಲಿದೆ ? ಯಾವ ರೀತಿ ಇದೆ ? ಎಂದರೆ ಈ ಬ್ರಹ್ಮವೇ ನಮ್ಮ ಆತ್ಮನ ಸ್ವರೂಪದಲ್ಲಿದೆ. ಈ ಆತ್ಮನು ನಮ್ಮ ಹೃದಯದಲ್ಲಿಯೇ ಇದ್ದಾನೆ.’ ಎಂದು ವೇದಗಳಲ್ಲಿ ಹೇಳಿದೆ. ಇದನ್ನು ಸರಿಯಾಗಿ ತಿಳಿದುಕೊಳ್ಳುವುದರಿಂದ “ಈ ಅನಾದಿಯಾದ ಪ್ರಪಂಚದಲ್ಲಿ ನಾನು ಹುಟ್ಟಿ ಕೆಲವೇ ಕಾಲ ಬದುಕಿ ಮರಣಹೊಂದುತ್ತೇನೆ. ಆದ್ದರಿಂದ ಇರುವಷ್ಟರಲ್ಲಿ ತನಕ ಎಲ್ಲ ಭೋಗಗಳನ್ನೂ ಹೊಂದಬೇಕು” ಎಂಬ ಅತ್ಯಾಶೆ, ಅದಕ್ಕಾಗಿ ಮಾಡುವ ವ್ಯರ್ಥಪ್ರಯತ್ನಗಳನ್ನೂ ದೂರಮಾಡಲು ಸಾಧ್ಯವಾಗುತ್ತದೆ.

ಸ್ವಾರ್ಥವನ್ನು ಬಿಟ್ಟು, ಆತ್ಮತೃಪ್ತಿಯಿಂದ ಇರುತ್ತಾ ಪರೋಪಕಾರ, ಪರಮಾತ್ಮಚಿಂತನೆ, ಸದ್ವಿದ್ಯೆಯ ಅಧ್ಯಯನ, ಜ್ಞಾನಿಗಳ ಸತ್ಸಂಗ, - ಇವುಗಳಿಗಾಗಿ ಸ್ವಲ್ಪವಾದರೂ ಸಮಯವನ್ನು ಮೀಸಲಿರಿಸಬೇಕು. ಇಂತಹ ಸಾಧನಗಳಿಂದ ಮನಸ್ಸಿನ ಕೊಳೆಯನ್ನೂ, ಕ್ಲೇಶವನ್ನೂ ತೊಲಗಿಸಿಕೊಂಡು ಶ್ರದ್ಧೆಯಿಂದ ವಿಚಾರ ಮಾಡುವುದೇ ಈ ಆತ್ಮಜ್ಞಾನದ, ಅಧ್ಯಾತ್ಮವಿದ್ಯೆಯ ಸಂಪಾದನೆಗೆ ಅತ್ಯಂತ ಸುಲಭೋಪಾಯ’ ಎಂದು ಶ್ರದ್ಧಾಳುಗಳ ಮನಮುಟ್ಟುವಂತೆ ವೇದಗಳಲ್ಲಿ ಹೇಳಿದೆ. ಆಧುನಿಕ ಕಾಲದಲ್ಲಂತೂ ಈ ಸಾಧನಗಳ ಅಭ್ಯಾಸ, ಅಧ್ಯಾತ್ಮವಿದ್ಯೆಗಷ್ಟೇ ಅಲ್ಲದೆ ಲೌಕಿಕ ಜೀವನದಲ್ಲಿ ನೆಮ್ಮದಿ, ಶಾಂತಿಯನ್ನು ಕಂಡುಕೊಳ್ಳಲೂ ಸಹ ಹಿಂದೆಂದಿಗಿಂತಲೂ ಅತ್ಯಾವಶ್ಯಕ ಎಂಬುದನ್ನು ಎಲ್ಲರೂ ಸುಲಭವಾಗಿ ಮನಗಾಣಬಹುದಾಗಿದೆ !

- ದಿಲೀಪ್ ಬೆಳ್ಳಾವೆ, ಬೆಂಗಳೂರು
(Published in Adhyatma Prakasha, Aug 2003)

ಸಂಬಂಧಿತ ವಿಷಯಗಳು
ಆಧ್ಯಾತ್ಮಿಕ ಸಾಧನೆ ಎಂದರೇನು?
ಕಲಿಯುಗದ ಸರ್ವಶ್ರೇಷ್ಠ ಸಾಧನೆ - ನಾಮಜಪ
‘ಗುರುಕೃಪಾಯೋಗ’ - ಕಲಿಯುಗದಲ್ಲಿ ಶೀಘ್ರ ಆಧ್ಯಾತ್ಮಿಕ ಉನ್ನತಿಯನ್ನು ಸಾಧ್ಯಗೊಳಿಸುವ ಸಾಧನಾಮಾರ್ಗ!
ಶ್ರೀ ಗುರುದೇವ ದತ್ತ : ಅತೃಪ್ತ ಪೂರ್ವಜರ ತೊಂದರೆಗಳಿಂದ ರಕ್ಷಿಸುವ ದೇವತೆ
ಹೀಗೆ ಹಂತಹಂತವಾಗಿ ನಾಮಜಪವನ್ನು ಹೆಚ್ಚಿಸಿ!
ಕಲಿಯುಗದಲ್ಲಿ ಸುಲಭವಾಗಿ ಎಲ್ಲ ಸಮಯಗಳಲ್ಲೂ ಮಾಡಬಹುದಾದ ಉಪಾಸನೆ - ಕುಲದೇವತೆಯ ನಾಮಜಪ
ಆಧ್ಯಾತ್ಮಿಕ ಸಾಧನೆ ಮಾಡುವುದರ ಮಹತ್ವ
ಆನಂದಮಯ ಜೀವನಕ್ಕಾಗಿ ಅಧ್ಯಾತ್ಮ
ಕಾಲಾನುಸಾರ ದೇವತೆಗಳ ಆವಶ್ಯಕ ಉಪಾಸನೆ - ‘ಸಮಷ್ಟಿ ಸಾಧನೆ’
ಗುರುಗಳ ಮಹತ್ವ
ಆಧ್ಯಾತ್ಮಿಕ ಸಾಧನೆ ಮಾಡಿ ಸಂತಪದವಿ ತಲುಪಿದ ವಿದೇಶಿ ಸಾಧಕಿ
Dharma Granth

5 comments:

  1. ಅಧ್ಯಾತ್ಮ ಸಾಧನೆಯನ್ನು ಮಾಡುವುದು ಹೇಗೆ?
    ಆಧ್ಯಾತ್ಮ ಸಾಧನೆಗೆ ಸದ್ಗುರುವಿನ ಮಾರ್ಗದರ್ಶನದ ಅಗತ್ಯವಿದೆಯಂತೆ.
    ಆದರೆ ಸದ್ಗುರುವನ್ನು ಹುಡುಕುವುದು ಹೇಗೆ? ನಿಜವಾದ ಮಾರ್ಗದರ್ಶನ ಎಲ್ಲಿ ಸಿಗುತ್ತದೆ ಎಂದು ತಿಳಿಯಲಿಲ್ಲ.
    ಕೆಲವು ಡೋಂಗಿ ಗುರುಗಳು ಹಣಕ್ಕಾಗಿ ಆಧ್ಯಾತ್ಮ ಎಂದು ಹೆಸರು ಹೇಳಿ ಮೋಸ ಮಾಡುತಿದ್ದರೆ, ಇನ್ನು ಕೆಲವರು ಹೆಸರಿಗಾಗಿ ಈ ಕೆಲಸ ಮಾಡುತಿದ್ದಾರೆ. ಸದ್ಗುರುವಿನ ಹುಡುಕಾಟ ಹೇಗೆ?

    ReplyDelete
    Replies
    1. ನಮಸ್ಕಾರ ಸುದರ್ಶನ ರವರೇ, ನಿಮ್ಮ ಪ್ರಶ್ನೆ ಅತ್ಯುತ್ತಮವಾಗಿದೆ. ನೀವು ಹೇಳಿದಂತೆ ಆಧ್ಯಾತ್ಮಿಕ ಸಾಧನೆಗೆ ಗುರುಗಳ ಮಾರ್ಗದರ್ಶನ ಖಂಡಿತ ಬೇಕು. ಕೇವಲ ಗುರುಗಳಿಗೆ ಮಾತ್ರ ಯಾವುದೇ ವ್ಯಕ್ತಿಯು ಹೇಗೆ ಸಾಧನೆ ಮಾಡಬಲ್ಲನು, ಅವನಿಗೆ ಯಾವ ರೀತಿ ಸಾಧನೆ ಹೇಳಿದರೆ ಉನ್ನತಿಯಾಗುತ್ತದೆ ಎಂದು ತಿಳಿದಿರುತ್ತದೆ. ನೀವು ಹೇಳಿದಂತೆ ಈಗ ನಿಜವಾದ ಗುರುಗಳು ಸಿಗದೇ ಕೇವಲ ಹಣಕ್ಕಾಗಿ ಅಥವಾ ಸ್ವಾರ್ಥಕ್ಕಾಗಿ ಇರುವ ಗುರುಗಳೇ ಪ್ರಪಂಚದಲ್ಲಿ ಹೆಚ್ಚಾಗಿದ್ದಾರೆ. ಸದ್ಗುರುಗಳನ್ನು ಹುಡುಕುವ ಬದಲು ಗುರುಗಳ ಕೃಪೆಯಾಗುವಂತಹ ಸಾಧನೆ ಮಾಡಿದರೆ ಬೇಗನೇ ಗುರುಪ್ರಾಪ್ತಿಯಾಗುತ್ತದೆ. ಆಧ್ಯಾತ್ಮಿಕ ಸಾಧನೆ ಹೇಗೆ ಮಾಡಬೇಕು ಎಂಬ ನಿಮ್ಮ ಪ್ರಶ್ನೆಗೆ ಈ ಕೊಂಡಿಯಲ್ಲಿರುವ ವಿವರವಾದ ಉತ್ತರವನ್ನು ನೋಡಿ http://dharmagranth.blogspot.in/2012/11/Gurukrupayoga.html ಯಾವುದೇ ಮಾರ್ಗದರ್ಶನಕ್ಕಾಗಿ ನಮ್ಮನ್ನು ಸಂಪರ್ಕಿಸಿ. ಸನಾತನ ಸಂಸ್ಥೆಯಲ್ಲಿ ಗುರುಗಳ ಮಾರ್ಗದರ್ಶನದಡಿಯಲ್ಲಿ ಸಾವಿರಾರು ಸಾಧಕರು ಹಲವಾರು ವರ್ಷಗಳಿಂದ ಸಾಧನೆಯನ್ನು ಮಾಡುತ್ತಿದ್ದು ನೂರಾರು ಸಾಧಕರು ಜನ್ಮ-ಮೃತ್ಯುವಿನ ಚಕ್ರದಿಂದ ಬಿಡುಗಡೆಯಾಗಿದ್ದಾರೆ ಮತ್ತು ೩೦ಕ್ಕೂ ಹೆಚ್ಚು ಸಾಧಕರು ಸಂತಪದವಿಯನ್ನೂ ತಲುಪಿದ್ದಾರೆ. ಇಂತಹ ಸಂಸ್ಥೆ ಪ್ರಪಂಚದಲ್ಲಿದೆ ಎಂದೇ ಎಷ್ಟೋ ಜನರಿಗೆ ಇನ್ನೂ ತಿಳಿದಿಲ್ಲ. ನೀವು ಈ ಕೊಂಡಿಯಲ್ಲಿ ಕೊಟ್ಟಂತೆ ಮತ್ತು ಸಾಧ್ಯವಾದಷ್ಟು ಬೇಗನೇ ಸಾಧನೆಯನ್ನು ಆರಂಭಿಸಿ

      Delete
    2. ನಮಸ್ಕಾರ. ಅತ್ಯುತ್ತಮ ಮಾಹಿತಿಯನ್ನು ನೀಡಿದ್ದೀರಿ. ಧನ್ಯವಾದಗಳು.
      ಸನಾತನ ಸಂಸ್ಥೆಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಉತ್ಸುಕನಾಗಿದ್ದೇನೆ. ಈ ಬ್ಲಾಗಿನಲ್ಲಿ ಸನತನ ಸಂಸ್ಥೆಯ ಸಂಪರ್ಕ ಮಾಹಿತಿಗಾಗಿ ಹುಡುಕಿದ್ದೇನೆ. ಆದರೆ ನನಗೆ ಸಿಗಲಿಲ್ಲ. ಸನಾತನ ಸಂಸ್ಥೆಯ ವೆಬ್ ಸೈಟ್ ಕೊಂಡಿ ಇದ್ದರೆ ದಯವಿಟ್ಟು ನೀಡಬೇಕಾಗಿ ವಿನಂತಿ. ಅಥವಾ ಸಂಪರ್ಕ ಹೇಗೆ ಮಾಡಬೇಕೆಂದು ದಯವಿಟ್ಟು ತಿಳಿಸಿಕೊಡಿ.

      Delete
    3. ನಮಸ್ಕಾರ, ತಾವು ಇರುವ ಊರು ಮತ್ತು ಮೊಬೈಲ್ ಸಂಖ್ಯೆಯನ್ನು 'contact us' ನಲ್ಲಿ ಹಾಕಿ. ನಿಮ್ಮ ಊರಿಗೆ ಸಮೀಪವಿರುವ ಸಾಧಕರೇ ತಮ್ಮನ್ನು ಸಂಪರ್ಕಿಸುತ್ತಾರೆ.

      Delete

Note: only a member of this blog may post a comment.