ಸತ್ಯಪ್ರೇಮಿ ಮತ್ತು ನೀತಿವಂತ ಹಿಂದೂಗಳೇ ದೇಶದ ಉತ್ಕರ್ಷವನ್ನು ಸಾಧಿಸಲು ಸಾಧ್ಯ!

ಹಿಂದೂಗಳೇ, ಹಿಂದೂ ಸಂಸ್ಕೃತಿಯ ಗತವೈಭವವನ್ನು ಮರಳಿ ಪಡೆಯಲು ಸಂಘಟಿತರಾಗಿ!
ಹಿಂದೂಗಳು ವಿಶ್ವದ ಯಾವುದೇ ದೇಶದಲ್ಲಿ ವಿಹರಿಸುವಾಗ ಮಾನಹಾನಿಯನ್ನು ಎದುರಿಸಬೇಕಾಗುತ್ತದೆ. ಭಾರತದಲ್ಲಿ ಹಿಂದೂಗಳ ಸ್ಥಿತಿ ಎಷ್ಟು ದಯನೀಯವಾಗಿದೆಯೆಂದರೆ, ಇಂದು ‘ಹಿಂದೂ’ ಎಂದು ಬದುಕುವುದೂ ಅವಮಾನಕಾರಿಯಾಗಿದೆ ಎಂದೆನಿಸುತ್ತದೆ. ಭಾರತವು ವೈಭವಶಾಲಿ ಮತ್ತು ಅತ್ಯುಚ್ಚ ಶಿಖರದಲ್ಲಿದ್ದಾಗ ಇಲ್ಲಿ ವಾಸಿಸುತ್ತಿದ್ದ ಸತ್ಯಪ್ರೇಮಿ ಹಾಗೂ ನೀತಿವಂತ ಹಿಂದೂಗಳ ಬಗ್ಗೆ ಪಾಶ್ಚಾತ್ಯರು ಬಹಳಷ್ಟು ಬರೆದಿಟ್ಟಿದ್ದಾರೆ. ಇಂದಿಗೂ ಹಿಂದೂಗಳಲ್ಲಿ ಅನೇಕ ದೈವೀ ಗುಣಗಳು ಕಾಣಿಸುತ್ತವೆ. ಹಿಂದೂಗಳಿಗೆ ಅವರ ಅದ್ವಿತೀಯ ಗುಣಗಳ ಅರಿವಾಗಬೇಕೆಂದು ಈ ಲೇಖನವನ್ನು ಪ್ರಕಟಿಸುತ್ತಿದ್ದೇವೆ.

ಆಧುನಿಕ ವಿಜ್ಞಾನ ಮತ್ತು ಪ್ರಜಾಪ್ರಭುತ್ವವು ಧರ್ಮಾಚರಣೆ ಮಾಡುವ ಹಿಂದೂಗಳ ನೈತಿಕಮೌಲ್ಯವನ್ನು ಎಂದಾದರೂ ಕಲಿಸಬಹುದೇ?
‘ಬಾಗಿಲು ಅಥವಾ ಕಿಟಕಿಯಿಲ್ಲದ ಮನೆಗಳಿರುವ ಯಾವುದಾದರೊಂದು ಹಳ್ಳಿಯನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ ? ಆದರೆ ಒರಿಸ್ಸಾದಲ್ಲಿ ಸಮುದ್ರದಡಕ್ಕೆ ಹೊಂದಿಕೊಂಡಿರುವ ‘ಕೇಂದ್ರಪಾರಾ’ ಜಿಲ್ಲೆಯಲ್ಲಿನ ೪೦ ಹೆಕ್ಟೆರ್ ಭೂಮಿಯಲ್ಲಿ ಇಂತಹ ಒಂದು ಹಳ್ಳಿಯಿದೆ. ಅದರ ಹೆಸರು ‘ಸಾದಿಯಾ ಗ್ರಾಮ’. ಅಲ್ಲಿ ಒಂದೇ ರೀತಿಯ ೧೪೦ ಮನೆಗಳಿವೆ. ಈ ಗ್ರಾಮವು ಆ ಪರಿಸರದಲ್ಲಿ ‘ಬಾಗಿಲಿಲ್ಲದ ಹಳ್ಳಿ’ಯೆಂದೇ ಪ್ರಸಿದ್ಧವಾಗಿದೆ. ‘ಖರಕಾಯಿ ಠಾಕೂರಾಣಿ’ ಸಾದಿಯಾದ ಗ್ರಾಮದೇವತೆಯಾಗಿದ್ದಾಳೆ. ಆ ದೇವಿಯು ಹಳ್ಳಿಯಲ್ಲಿನ ಪ್ರತಿಯೊಂದು ಮನೆಯನ್ನು ರಕ್ಷಿಸುತ್ತಾಳೆ ಎಂಬ ಶ್ರದ್ಧೆಯಿಂದ ಮನೆಗಳಿಗೆ ಬಾಗಿಲು ಹಾಕುವುದಿಲ್ಲ. (ಮಹಾರಾಷ್ಟ್ರದ ಶನಿ ಶಿಂಗಾಣಪುರದಲ್ಲಿಯೂ ಯಾರೂ ಬಾಗಿಲಿಗೆ ಬೀಗ ಹಾಕುವುದಿಲ್ಲ. ಅಲ್ಲಿಯ ಗ್ರಾಮವಾಸಿಗಳಿಗೆ ಗ್ರಾಮದೇವತೆಯಾದ ಶನಿದೇವರು ಮನೆಗಳ ರಕ್ಷಣೆ ಮಾಡುತ್ತಾರೆ ಎಂಬ ಶ್ರದ್ಧೆಯಿದೆ. - ಸಂಕಲನಕಾರರು)

ಭಾರತದಲ್ಲಿ ಭ್ರಷ್ಟಾಚಾರದ ಹಾವಳಿಯಿದೆ. ಕಳ್ಳತನ ಮತ್ತು ಲಂಚಗುಳಿತನದಂತಹ ಪ್ರದೂಷಣಯುಕ್ತ ವಾತಾವರಣದಲ್ಲಿಯೂ ಇಂತಹ ಬಾಗಿಲುಗಳಿಲ್ಲದ ಹಳ್ಳಿಗಳು ಕಾಣಲು ಸಿಗುತ್ತವೆ, ಎಂದರೆ ಯಾರಾದರೂ ನಂಬುವರೇ? ‘ಟೈಮ್ಸ್ ಆಫ್ ಇಂಡಿಯಾ’, ‘ಸ್ಟೇಟ್ಸ್‌ಮನ್’, ‘ಹಿಂದೂ’ ಇತ್ಯಾದಿ ಹೆಸರಾಂತ ನಿಯತಕಾಲಿಕೆಗಳಿಗೆ ಈ ಹಳ್ಳಿಯನ್ನು ಪ್ರಸಿದ್ಧಿಗೊಳಿಸಲು ಯೋಗ್ಯವೆನಿಸಿದ್ದರಿಂದ ಅವರು ಅದಕ್ಕೆ ಪ್ರಸಿದ್ಧಿ ನೀಡಿದರು. ಪಿ.ಟಿ.ಐ. (P.T.I) ಈ ವಾರ್ತಾಸಂಸ್ಥೆಯು ಸಾದಿಯಾ ಹಳ್ಳಿಯ ವಾರ್ತೆಯನ್ನು ಜಗತ್ತಿನಾದ್ಯಂತ ಪಸರಿಸಿತು.

ವಾಸ್ತವದಲ್ಲಿ ಇದೊಂದು ದೊಡ್ಡ ಖೇದಕರ ವಿಷಯವಾಗಿದೆ. ನಮ್ಮ ಸನಾತನ ಹಿಂದೂ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಇಂದಿನಂತೆ ಕೇವಲ ಒಂದೇ ಸಾದಿಯಾ ಹಳ್ಳಿ ಇರದೇ ಸಂಪೂರ್ಣ ಭಾರತದ ಪ್ರತಿಯೊಂದು ಹಳ್ಳಿಯೂ ಹೀಗೆಯೇ ಇತ್ತು. ಇದು ನಮ್ಮ ಸಂಸ್ಕ ತಿಯ ದ್ಯೋತಕವಾಗಿದೆ.

ಹಿಂದೂ ಸಮಾಜದ ನೈತಿಕಮೌಲ್ಯಗಳ ಬಗ್ಗೆ ವಿದೇಶಿಯರ ಗೌರವೋದ್ಗಾರ
ಇವು ನಮ್ಮ ಹಿಂದೂ ಸಮಾಜದ ಸಾವಿರಾರು ವರ್ಷಗಳಿಂದಲೂ ನಡೆದು ಬಂದ ಶ್ರೇಷ್ಠ ನೈತಿಕಮೌಲ್ಯಗಳಾಗಿವೆ. ನಮ್ಮ ಇಂತಹ ಅದ್ಭುತ ನೈತಿಕಮೌಲ್ಯಗಳ ಬಗ್ಗೆ ಭಾರತಕ್ಕೆ ಬಂದಿರುವ ವಿದೇಶಿಯರು ಬಹಳಷ್ಟು  ಪ್ರಶಂಸಿಸಿದ್ದಾರೆ.

೧. ಪ್ರಾಚೀನ ಕಾಲದಲ್ಲಿ, ಅಂದರೆ ಸುಮಾರು ೨,೩೦೦ ವರ್ಷಗಳ ಮೊದಲು ನಮ್ಮ ಭರತಖಂಡದಲ್ಲಿ ಗ್ರೀಕ್ ಇತಿಹಾಸಕಾರ ಮೆಗಾಸ್ಥೆನೀಸ್ ಬಂದನು. ಹಿಂದೂಗಳ ಸತ್ಯಪ್ರಿಯತೆಯನ್ನು ಕಂಡು ಅವನಿಗೆ ಬಹಳ ಆಶ್ಚರ್ಯವಾಯಿತು. ಅವನು ‘ಹಿಂದೂ ಸಂಸ್ಕೃತಿಗೆ  ಬೀಗ ಮತ್ತು ಬೀಗದ ಕೈಯ ಬಗ್ಗೆ ತಿಳಿದೇ ಇಲ್ಲ!’ ಎಂದಿದ್ದಾನೆ.

೨. ಅನಂತರ ‘ಫಾಹಿಯೆನ್’ ಎಂಬ ಚೀನೀ ಬೌದ್ಧಭಿಕ್ಷು ಭಾರತಕ್ಕೆ ಬಂದನು. ಹಿಂದೂಸ್ಥಾನವನ್ನು ನೋಡುವುದು ಹಾಗೂ ಬೌದ್ಧಧರ್ಮವನ್ನು ಅಧ್ಯಯನ ಮಾಡುವುದೇ ಅವನು ಭರತಖಂಡಕ್ಕೆ ಬಂದಿರುವುದರ ಹಿಂದಿನ ಉದ್ದೇಶವಾಗಿತ್ತು. ಭಾರತದ ಅಪಾರ ನಿಸರ್ಗ ಸಂಪತ್ತು, ಜ್ಞಾನಸಂಪತ್ತು ಮತ್ತು ಶ್ರೇಷ್ಠಮಟ್ಟದ ಸಂಸ್ಕೃತಿಯನ್ನು ನೋಡಿ ಅವನಿಗೆ ವಿಸ್ಮಯವಾಯಿತು ಹಾಗೂ ಅವನು ‘ಮೆಗಾಸ್ಥೆನೀಸ್’ನಂತೆಯೇ ಉದ್ಗಾರ ಮಾಡಿದನು.

೩. ಇವೆಲ್ಲವೂ ಬಹಳ ಹಿಂದಿನ ವಿಷಯಗಳಾಗಿವೆ; ಆದರೆ ಇತ್ತೀಚೆಗಿನ ಅಂದರೆ ೩೫೦ವರ್ಷಗಳ ಹಿಂದೆ ಪೋರ್ಚುಗೀಸರು ಭಾರತಕ್ಕೆ ಬಂದಿದ್ದರು. ಅವರು ‘ಹಿಂದೂ ಧರ್ಮೀಯರ ಅತ್ಯಂತ ಸುಸಂಸ್ಕೃತ ಜೀವನ ಪದ್ಧತಿಯಲ್ಲಿ ವಿಲಕ್ಷಣವಾದ ಪ್ರಭಾವವಿದೆ. ಕೇವಲ ಉಚ್ಚವರ್ಣಿಯರೇ ಅಲ್ಲ, ಕನಿಷ್ಠ ಜಾತಿಯವರೂ ಈ ಎಲ್ಲ ಸುಂದರ ಪರಂಪರೆಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾರೆ.’ ಎಂದು ಅತ್ಯಂತ ಗೌರವದಿಂದ ಹಾಗೂ ವಿಸ್ಮಯದಿಂದ ಹೇಳುತ್ತಾರೆ. ವಿಸ್ಮಯಗೊಂಡ ಪೋರ್ಚುಗೀಸ್ ಲೇಖಕರು ತಮ್ಮ ಆಶ್ಚರ್ಯವನ್ನು ಅಡಗಿಸದೇ ನೇರವಾಗಿ ‘ಇಲ್ಲಿನ ಅತ್ಯಂತ ಕನಿಷ್ಠ ಸಿಪಾಯಿಯೂ ಈ ಮೌಲ್ಯವನ್ನು ತಪ್ಪದೇ ಜೋಪಾನ ಮಾಡುತ್ತಾನೆ’ ಎಂದು ಹೇಳುತ್ತಾರೆ. ಭಾರತೀಯ ಯುದ್ಧಕೈದಿಗಳು ಅವರ ಅವಧಿ ಮುಗಿಯುತ್ತಲೇ ಸ್ವೇಚ್ಛೆಯಿಂದ ಮರಳುತ್ತಾರೆ. ಅವರು ವಿಶ್ವಾಸಘಾತವನ್ನು ಮೃತ್ಯುವಿಗಿಂತಲೂ ಭಯಂಕರವೆಂದು ನಂಬುತ್ತಾರೆ. ಸತ್ಯವಚನಗಳ ಭ್ರಷ್ಟತೆ ಹಾಗೂ ತೊಂದರೆಯಲ್ಲಿ ಸಿಲುಕಿದ ಶತ್ರುವಿನ ಲಾಭ ಪಡೆದುಕೊಳ್ಳುವುದನ್ನು ಅವರು ನೀಚತನವೆಂದು ನಂಬುತ್ತಾರೆ.

ಇಂದಿಗೂ ಕೆಲವು ಹಿಂದೂಗಳಲ್ಲಿ ನೈತಿಕ ಮೌಲ್ಯಗಳಿವೆ!
ಈ ಸಂದರ್ಭದಲ್ಲಿನ ಉದಾಹರಣೆಯೆಂದರೆ ಇತ್ತೀಚೆಗೆ ಹರಿದ್ವಾರದ ಕುಂಭಮೇಳದಲ್ಲಿ ನಡೆದಿರುವ ಒಂದು ಪ್ರಸಂಗ! ಕುಂಭಮೇಳದಲ್ಲಿ ಸಾಧುಗಳ ಹಾಗೂ ಯಾತ್ರಿಕರ ಒಂದು ದೊಡ್ಡ ಮೆರವಣಿಗೆ ಹೋಗುತ್ತಿತ್ತು. ಅದರ ಪ್ರಮಾಣದಲ್ಲಿ ಕುಂಭಮೇಳದ ಕ್ಷೇತ್ರವು ಚಿಕ್ಕದಾಗಿತ್ತು. ಈ ಮೆರವಣಿಗೆಯು ವಿಲಕ್ಷಣವಾಗಿ ನಿಧಾನವಾಗಿ ಮುಂದೆ ಸರಿಯುತ್ತಿತ್ತು. ಜನರು ನೂಕುನುಗ್ಗಲಿನಲ್ಲಿ ನಡೆಯುತ್ತಿದ್ದರು. ಈ ಸಮುದಾಯದಲ್ಲಿ ಒಬ್ಬ ವೃದ್ಧ ವೈರಾಗಿಯೂ ಇದ್ದನು. ಅವನು ಮೈಮೇಲೆ ಅಕ್ಷರಶಃ ಹರಕುಮುರುಕಾದ ಬಟ್ಟೆಗಳನ್ನು ತೊಟ್ಟಿದ್ದನು. ಅವನು ಜನಸಂದಣಿಯಲ್ಲಿ ಮುಂದೆ ಹೋಗಲು ಪ್ರಯತ್ನಿಸುತ್ತಿದ್ದನು. ದೊಡ್ಡಸ್ವರದಲ್ಲಿ ಏನೋ ಹೇಳುತ್ತಿದ್ದನು. ಅವನ ಕೈಯಲ್ಲಿದ್ದ ಒಂದು ಕೋಲನ್ನು ಅವನು ಮೇಲಕ್ಕೆತ್ತಿ ಹಿಡಿದಿದ್ದನು. ಆ ಕೋಲಿನ ತುದಿಯಲ್ಲಿ ಅತ್ಯಂತ ಬೆಲೆಬಾಳುವ ಒಂದು ವಜ್ರಖಚಿತ ಬಂಗಾರದ ಉಂಗುರ ಹೊಳೆಯುತ್ತಿತ್ತು. ಅವನು ‘ಯಾರ ಉಂಗುರ ಕಳೆದು ಹೋಗಿದೆ’ ಎಂದು ಜೋರಾಗಿ ಕೂಗುತ್ತಿದ್ದನು. ಅವನು ಆ ಉಂಗುರವನ್ನು ಹಿಡಿದುಕೊಂಡು ನಾಲ್ಕೂ ದಿಕ್ಕಿನಲ್ಲಿ ಅದರ ಹಕ್ಕುದಾರರನ್ನು ಹುಡುಕುತ್ತಿದ್ದನು. ಒಂದು ಮೂಲೆಯಲ್ಲಿ ಓರ್ವ ಪ್ರತಿಷ್ಠಿತ ಮಾರವಾಡಿ ಸ್ತ್ರೀಯು ಅತನನ್ನು ನೋಡಿದಳು. ತಕ್ಷಣ ಅವಳು ಅವನ ಹತ್ತಿರ ಹೋಗಿ ‘ಇದು ನನ್ನ ಉಂಗುರ. ಗಂಗೆಯ ದಡದ ದಕ್ಷಿಣ ದಿಕ್ಕಿನಲ್ಲಿರುವ ಶಂಕರನ ದೇವಸ್ಥಾನದ ಎದುರಿಗೆ ನಾನು ಸ್ನಾನ ಮಾಡುವಾಗ ತೆಗೆದಿಟ್ಟಿದ್ದೆನು. ಸ್ನಾನ ಮಾಡಿ ವಸ್ತ್ರಧರಿಸಿ ಬರುವಾಗ ಉಂಗುರ ತೆಗೆದುಕೊಳ್ಳಲು ಮರೆತೆನು’ ಎಂದು ಹೇಳಿದಳು. ಅವಳು ಹೇಳಿದಂತೆ ಆ ಸಾಧುವಿಗೆ ಅಲ್ಲಿಯೇ ಉಂಗುರ ಸಿಕ್ಕಿತ್ತು. ಅವನಿಗೆ ಆನಂದವಾಯಿತು. ಅವನು ‘ಈಗ ನನಗೆ ಸಮಾಧಾನವಾಯಿತು. ನನಗೆ ಉಂಗುರದ ನಿಜವಾದ ವಾರಸುದಾರರು ದೊರಕಿದರು. ನನ್ನ ಮನಸ್ಸಿನ ಒತ್ತಡ ದೂರವಾಯಿತು’ ಎಂದು ಹೇಳಿದನು. ಆ ಮಾರವಾಡಿ ಸ್ತ್ರೀಯು ಕೃತಜ್ಞತೆಯಿಂದ ಆ ಸಾಧುವಿಗೆ ೨೦೦ರೂಪಾಯಿ ಕೊಡಲು ಮುಂದಾದಳು. ಅವನು ಅದನ್ನು ತಿರಸ್ಕರಿಸಿ, ಸಿಡಿಮಿಡಿಗೊಂಡು ಜೋರಾಗಿ ಗದರಿಸುತ್ತಾ, ‘ನಾನು ಉಡುಗೊರೆಯ ಅಪೇಕ್ಷೆಯಿಂದ ನಿಮ್ಮನ್ನು ಹುಡುಕುತ್ತಿದ್ದೇನೆಂದು ಅನಿಸುತ್ತಿದೆಯೇ? ಈ ಕೃತಿಗಾಗಿ ಹಣ ನೀಡಲು ನಿಮಗೆ ಧೈರ್ಯವಾದರೂ ಹೇಗೆ ಬಂದಿತು? ನಿಮಗೆ ನಿಜವಾಗಿಯೂ ಉಂಗುರ ಸಿಕ್ಕಿದ ಆನಂದವಾಗಿದ್ದರೆ ಬಡವರಿಗೆ ಅನ್ನದಾನ ಮಾಡಿರಿ. ಭಿಕ್ಷುಕರಿಗೆ ಭಿಕ್ಷೆ ನೀಡಿರಿ. ನಾನು ಕೇವಲ ನನ್ನ ಕರ್ತವ್ಯ ಮಾಡಿದ್ದೇನೆ’ ಎಂದನು. ಹೀಗೆ ಹೇಳಿ ಅವನು ಆ ವಿರಾಟ ಜನಸಂದಣಿಯಲ್ಲಿ ಅದೃಶ್ಯನಾದನು. ಈ ಪ್ರಸಂಗವನ್ನು ಪ್ರತ್ಯಕ್ಷ ನೋಡಿದವರಿಗೆ ಎರಡು ಕಾರಣಗಳಿಂದ ವಿಸ್ಮಯವೆನಿಸಿತು.

ಅ. ಮೈಮೇಲೆ ಹರಕುಮುರುಕು ಬಟ್ಟೆ ಹೊದ್ದುಕೊಂಡಿದ್ದ ಆ ಮನುಷ್ಯ ಅತ್ಯಂತ ಬಡವ ಹಾಗೂ ಹಸಿದವನಾಗಿದ್ದನು. ಆದರೂ ‘ಆ ಉಂಗುರವನ್ನು ಇಟ್ಟುಕೊಳ್ಳಬೇಕು’ ಎನ್ನುವ ವಿಚಾರವು ಅವನನ್ನು ಸ್ಪರ್ಶಿಸಲಿಲ್ಲ. ತದ್ವಿರುದ್ಧವಾಗಿ ಆ ಉಂಗುರದ ವಾರಸುದಾರರನ್ನು ಹುಡುಕಿ ಆದಷ್ಟು ಬೇಗನೆ ಅದನ್ನು ಅವರಿಗೆ ತಲುಪಿಸಬೇಕೆನ್ನುವ ಆತುರವಿತ್ತು.

ಆ. ಆ ವಿರಾಟ ಜನಸಂದಣಿಯಲ್ಲಿ ಉಂಗುರವನ್ನು ಕೋಲಿನ ತುದಿಗೆ ಕಟ್ಟಿ ಅದನ್ನು ಮೇಲೆತ್ತಿ ಹಿಡಿದುಕೊಂಡ ಕಾರಣ ಅದನ್ನು ಎಲ್ಲರೂ ನೋಡುತ್ತಿದ್ದರು. ಆದರೂ ಯಾರೂ ಮುಂದೆ ಬಂದು ‘ಇದು ನನ್ನದು’ ಎಂದು ಹೇಳಲಿಲ್ಲ. ಅದಕ್ಕೆ ಸಂಬಂಧಿಸಿದ ಆ ಮಾರವಾಡಿ ಸ್ತ್ರೀಯೇ ಮುಂದೆ ಬಂದು ಹಾಗೆ ಹೇಳಿದಳು.

‘ಸತ್ಯ’ ಎಂಬುದು ಸನಾತನ ಹಿಂದೂ ಧರ್ಮದ ಶಿಕ್ಷಣವಾಗಿದೆ. ಇದು ಸಾವಿರಾರು ವರ್ಷಗಳ ನಮ್ಮ ಪರಂಪರೆಯಾಗಿದೆ; ಆದರೆ ದುರ್ದೈವದಿಂದ ನಾವು ಉದ್ದೇಶಪೂರ್ವಕವಾಗಿ ನಮ್ಮ ಪರಂಪರೆಯನ್ನು ತುಚ್ಛವಾಗಿ ಪರಿಗಣಿಸುತ್ತಿದ್ದೇವೆ. ಧರ್ಮರಹಿತ ರಾಜ್ಯದ ಬಗ್ಗೆ ಮಾತನಾಡುತ್ತೇವೆ. ಶ್ರೇಷ್ಠವಾಗಿರುವ ನಮ್ಮ ಸನಾತನ ಧರ್ಮವನ್ನು ಕೀಳಾಗಿ ಕಾಣುತ್ತೇವೆ. ಧರ್ಮದಿಂದಲೇ ನಾವು ನೀತಿನಿಯಮಗಳ ಮಿತಿಯಲ್ಲಿರಬಹುದು ಹಾಗೂ ಇರುತ್ತೇವೆ ಎಂಬುದನ್ನು ನಾವು ಮರೆಯುತ್ತೇವೆ. ‘ಧರ್ಮೋ ರಕ್ಷತಿ ರಕ್ಷಿತಃ’ ಇದೇ ನಮ್ಮ ಅಭಿಪ್ರಾಯವಾಗಿದೆ. - ಗುರುದೇವ ಡಾ.ಕಾಟೇಸ್ವಾಮೀಜಿ

(ಆಧಾರ : ಸಾಪ್ತಾಹಿಕ ಪತ್ರಿಕೆ ಸನಾತನ ಪ್ರಭಾತದಿಂದ ಆಯ್ದ ಭಾಗ)

No comments:

Post a Comment

Note: only a member of this blog may post a comment.