ಗುರುಗಳ ಮಹತ್ವ

ವರ್ತಮಾನ (ಪ್ರಸ್ತುತ) ಜನ್ಮದಲ್ಲಿನ ಅತ್ಯಂತ ಚಿಕ್ಕ-ಚಿಕ್ಕ ವಿಷಯಗಳಿಗೂ ಪ್ರತಿಯೊಬ್ಬರೂ ಶಿಕ್ಷಕರು, ವೈದ್ಯರು, ವಕೀಲರು ಇತ್ಯಾದಿ ಇತರ ಯಾರಿಂದಲಾದರೂ ಮಾರ್ಗದರ್ಶನವನ್ನು ಪಡೆಯುತ್ತಾರೆ; ಹಾಗಾದರೆ ‘ಜನ್ಮ-ಮರಣದ ಚಕ್ರದಿಂದ ಮುಕ್ತಿ ಕೊಡುವ ಗುರುಗಳ ಮಹತ್ವ ಎಷ್ಟಿರಬಹುದು’ ಎಂಬುದರ ಕಲ್ಪನೆಯನ್ನೂ ಸಹ ಮಾಡಲು ಆಗುವುದಿಲ್ಲ. ಇದು ಮುಂದಿನ ಅಂಶಗಳಿಂದ ಸ್ಪಷ್ಟವಾಗುವುದು.

ಗುರುಮಹಿಮೆ
೧. ತಂದೆ ಪುತ್ರನಿಗೆ ಜನ್ಮವನ್ನು ಮಾತ್ರ ಕೊಡುತ್ತಾನೆ, ಆದರೆ ಗುರುಗಳು ಅವನನ್ನು ಜನ್ಮಮೃತ್ಯುವಿನ ಚಕ್ರದಿಂದ ಮುಕ್ತಗೊಳಿಸುತ್ತಾರೆ. ಆದ್ದರಿಂದಲೇ ತಂದೆಗಿಂತಲೂ ಗುರುಗಳನ್ನು ಶ್ರೇಷ್ಠವೆಂದು ಪರಿಗಣಿಸಲಾಗಿದೆ.

೨. ಒಂದು ಬದ್ಧ ಜೀವ ಇನ್ನೊಂದು ಬದ್ಧ ಜೀವವನ್ನು ಉದ್ಧಾರ ಮಾಡಲಾರದು. ಗುರುಗಳು ಮುಕ್ತರಾಗಿರುವುದರಿಂದಲೇ ಶಿಷ್ಯನ ಉದ್ಧಾರವನ್ನು ಮಾಡಬಲ್ಲರು.

೩. ಸದ್ಗುರುಗಳು ಲಭಿಸದೇ (ಮೋಕ್ಷಕ್ಕೆ ಹೋಗುವ) ಮಾರ್ಗವು ಸಿಗುವುದಿಲ್ಲ; ಆದುದರಿಂದ ಮೊದಲು ಅವರ ಚರಣಗಳನ್ನು ಹಿಡಿಯಬೇಕು. (ಅವರ ಕೃಪೆ ಪ್ರಾಪ್ತವಾಗಲು ಪ್ರಯತ್ನಿಸಬೇಕು.) ಸದ್ಗುರುಗಳು ಅವರ ಶಿಷ್ಯನನ್ನು ಕ್ಷಣಾರ್ಧದಲ್ಲಿ ತಮ್ಮಂತೆ (ಮೋಕ್ಷದ ಅಧಿಕಾರಿಯನ್ನಾಗಿ) ಮಾಡುತ್ತಾರೆ. ಅವರಿಗೆ ಕಾಲ, ಸಮಯದ ಆವಶ್ಯಕತೆ ಇರುವುದಿಲ್ಲ. ಸದ್ಗುರುಗಳ ಮಹಿಮೆ ಎಷ್ಟು ಅಗಾಧವಾಗಿದೆ ಎಂದರೆ, ಅವರಿಗೆ ಸ್ಪರ್ಶಮಣಿಯ ಉಪಮೆಯೂ ಶೋಭಿಸುವುದಿಲ್ಲ. - ಸಂತ ತುಕಾರಾಮ ಮಹಾರಾಜರು

ಗುರುಗಳ ಆವಶ್ಯಕತೆ
೧. ಒಬ್ಬರೇ ಸಾಧನೆ ಮಾಡಿ ಸ್ವಬಲದ ಮೇಲೆ ಈಶ್ವರಪ್ರಾಪ್ತಿಯನ್ನು ಮಾಡಿಕೊಳ್ಳುವುದು ಬಹಳ ಕಠಿಣವಾಗಿರುತ್ತದೆ. ಇದಕ್ಕಿಂತ ಅಧ್ಯಾತ್ಮದ ಓರ್ವ ಅಧಿಕಾರಿ ವ್ಯಕ್ತಿಯ, ಅಂದರೆ ಗುರು ಅಥವಾ ಸಂತರ ಕೃಪೆಯನ್ನು ಸಂಪಾದಿಸಿದರೆ, ಈಶ್ವರಪ್ರಾಪ್ತಿಯ ಧ್ಯೇಯವು ಬೇಗನೇ ಸಾಧ್ಯವಾಗುತ್ತದೆ; ಆದುದರಿಂದಲೇ ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂದು ಹೇಳುತ್ತಾರೆ, ಇದಕ್ಕಾಗಿ ಗುರುಪ್ರಾಪ್ತಿಯಾಗುವುದು ಆವಶ್ಯಕವಾಗಿದೆ.

೨. ಗುರುಗಳು ಶಿಷ್ಯನ ಅಜ್ಞಾನವನ್ನು ಹೋಗಲಾಡಿಸಿ, ಅವನ ಆಧ್ಯಾತ್ಮಿಕ ಉನ್ನತಿಯಾಗಬೇಕೆಂದು, ಅವನಿಗೆ ಸಾಧನೆ ಹೇಳುತ್ತಾರೆ, ಅದನ್ನು ಅವನಿಂದ ಮಾಡಿಸಿಕೊಳ್ಳುತ್ತಾರೆ ಮತ್ತು ಅವನಿಗೆ ಅನುಭೂತಿಗಳನ್ನೂ ಕೊಡುತ್ತಾರೆ. ಗುರುಗಳ ಗಮನವು ಶಿಷ್ಯನ ಲೌಕಿಕ ಸುಖದ ಕಡೆಗೆ ಇರುವುದಿಲ್ಲ (ಏಕೆಂದರೆ ಅದು ಪ್ರಾರಬ್ಧಕ್ಕನುಸಾರ ಇರುತ್ತದೆ), ಆಧ್ಯಾತ್ಮಿಕ ಉನ್ನತಿಯ ಕಡೆಗಿರುತ್ತದೆ.

ಗುರುತತ್ತ್ವವು ಒಂದೇ ಆಗಿರುತ್ತದೆ: ಗುರುಗಳೆಂದರೆ ಸ್ಥೂಲದೇಹವಲ್ಲ. ಗುರುಗಳಿಗೆ ಸೂಕ್ಷ್ಮದೇಹ (ಮನಸ್ಸು) ಮತ್ತು ಕಾರಣದೇಹ (ಬುದ್ಧಿ) ಇರುವುದಿಲ್ಲ, ಅವರು ವಿಶ್ವಮನಸ್ಸು ಮತ್ತು ವಿಶ್ವಬುದ್ಧಿಯೊಂದಿಗೆ ಏಕರೂಪವಾಗಿರುತ್ತಾರೆ; ಅಂದರೆ ಎಲ್ಲ ಗುರುಗಳ ಮನಸ್ಸು ಮತ್ತು ಬುದ್ಧಿಯು ವಿಶ್ವಮನಸ್ಸು ಮತ್ತು ವಿಶ್ವಬುದ್ಧಿಯಾಗಿರುವುದರಿಂದ ಅವರು ಒಂದೇ ಆಗಿರುತ್ತಾರೆ. ಆದುದರಿಂದ ಎಲ್ಲ ಗುರುಗಳು ಬಾಹ್ಯತಃ (ಹೊರಗಿನಿಂದ) ಸ್ಥೂಲದೇಹದಿಂದ ಪ್ರತ್ಯೇಕವಾಗಿ ಕಂಡರೂ, ಒಳಗಿನಿಂದ ಮಾತ್ರ ಅವರು ಒಂದೇ ಆಗಿರುತ್ತಾರೆ. ಹೇಗೆ ಆಕಳಿನ ಯಾವುದೇ ಕೆಚ್ಚಲಿನಿಂದ ಒಂದೇ ರೀತಿಯ ಶುದ್ಧ ಮತ್ತು ನಿರ್ಮಲ ಹಾಲು ಬರುತ್ತದೆಯೋ, ಹಾಗೆಯೇ ಪ್ರತಿಯೊಬ್ಬ ಗುರುಗಳಲ್ಲಿ ಗುರುತತ್ತ್ವವು ಒಂದೇ ಆಗಿರುವುದರಿಂದ ಅವರಿಂದ ಬರುವ ಆನಂದಲಹರಿಗಳೂ ಒಂದೇ ಆಗಿರುತ್ತವೆ. ಹೇಗೆ ಸಮುದ್ರದ ಅಲೆಗಳು ತೀರದ ಕಡೆಗೆ ಬರುತ್ತವೆಯೋ, ಹಾಗೆಯೇ, ಬ್ರಹ್ಮ/ಈಶ್ವರನ ಅಲೆಗಳು, ಅಂದರೆ ಗುರುಗಳು ಸಮಾಜದ ಕಡೆಗೆ ಬರುತ್ತಾರೆ. ಹೇಗೆ ಎಲ್ಲ ಅಲೆಗಳ ನೀರಿನ ರುಚಿಯು ಒಂದೇ ಆಗಿರುತ್ತದೆಯೋ, ಹಾಗೆಯೇ ಎಲ್ಲ ಗುರುಗಳ ತತ್ತ್ವ ಒಂದೇ, ಅಂದರೆ ಬ್ರಹ್ಮವೇ ಆಗಿರುತ್ತದೆ. ನೀರಿನ ಟ್ಯಾಂಕಿಗೆ ಅನೇಕ ಚಿಕ್ಕ-ದೊಡ್ಡ ನಲ್ಲಿಗಳಿದ್ದರೂ, ಪ್ರತಿಯೊಂದು ನಲ್ಲಿಯಿಂದಲೂ ಟ್ಯಾಂಕಿಯ ನೀರೇ ಬರುತ್ತದೆ. ವಿದ್ಯುತ್ ದೀಪಗಳು ಬೇರೆಬೇರೆ ಆಕಾರಗಳಲ್ಲಿದ್ದರೂ, ಹರಿಯುವ ವಿದ್ಯುತ್‌ನಿಂದಾಗಿ ನಿರ್ಮಾಣವಾಗುವ ಪ್ರಕಾಶವೇ ಅವುಗಳಿಂದ ಹೊರ ಬೀಳುತ್ತದೆ. ಹಾಗೆಯೇ ಗುರುಗಳು ಬಾಹ್ಯತಃ ಬೇರೆಬೇರೆಯಾಗಿ ಕಂಡರೂ, ಅವರಲ್ಲಿರುವ ಗುರುತತ್ತ್ವ, ಅಂದರೆ ಈಶ್ವರೀತತ್ತ್ವವು ಒಂದೇ ಆಗಿರುತ್ತದೆ.

(ಹೆಚ್ಚಿನ ಮಾಹಿತಿಗಾಗಿ ಓದಿ ಸನಾತನ ಸಂಸ್ಥೆಯ ‘ಗುರುಗಳಿಗೆ ಸಂಬಂಧಿಸಿದ ಗ್ರಂಥಮಾಲಿಕೆ’)

ಸಂಬಂಧಿತ ವಿಷಯಗಳು
ಶ್ರೀ ಗುರುದೇವ ದತ್ತ : ಅತೃಪ್ತ ಪೂರ್ವಜರ ತೊಂದರೆಗಳಿಂದ ರಕ್ಷಿಸುವ ದೇವತೆ
ಹೀಗೆ ಹಂತಹಂತವಾಗಿ ನಾಮಜಪವನ್ನು ಹೆಚ್ಚಿಸಿ!
ಕಲಿಯುಗದಲ್ಲಿ ಸುಲಭವಾಗಿ ಎಲ್ಲ ಸಮಯಗಳಲ್ಲೂ ಮಾಡಬಹುದಾದ ಉಪಾಸನೆ - ಕುಲದೇವತೆಯ ನಾಮಜಪ
ಆಧ್ಯಾತ್ಮಿಕ ಸಾಧನೆ ಮಾಡುವುದರ ಮಹತ್ವ
ಆನಂದಮಯ ಜೀವನಕ್ಕಾಗಿ ಅಧ್ಯಾತ್ಮ
ಕಾಲಾನುಸಾರ ದೇವತೆಗಳ ಆವಶ್ಯಕ ಉಪಾಸನೆ - ‘ಸಮಷ್ಟಿ ಸಾಧನೆ’
ಅಧ್ಯಾತ್ಮ ಮತ್ತು ಆಧುನಿಕ ಮಾನಸಿಕತೆ

1 comment:

  1. ಗುರು ಯಾರು? ಗುರು ಅರ್ಹತೆ ಏನು?

    ReplyDelete

Note: only a member of this blog may post a comment.