ಸಂತರಿಗೆ ನಮಸ್ಕಾರ ಮಾಡುವ ಯೋಗ್ಯ ಪದ್ಧತಿ

೧. ಸಂತರ ಚರಣಗಳ ಮೇಲೆ ತಲೆಯನ್ನಿಟ್ಟು ನಮಸ್ಕಾರ ಮಾಡುವ ತಪ್ಪು ಪದ್ಧತಿಗಳು ಮತ್ತು ಅದರ ಕಾರಣಗಳು

ಅ. ಕೆಲವು ಜನರು ಸಂತರ ಚರಣಗಳ ಮೇಲೆ ಮೂಗನ್ನು ಇಡುತ್ತಾರೆ. ಇದರಿಂದ ಸಂತರ ಚರಣಗಳಿಂದ ಪ್ರಕ್ಷೇಪಿತವಾಗುವ ಚೈತನ್ಯವು ಕಡಿಮೆ ಪ್ರಮಾಣದಲ್ಲಿ ಗ್ರಹಿಸಲ್ಪಡುತ್ತದೆ.

ಆ. ಕೆಲವರು ಸಂತರ ಚರಣಗಳಿಗೆ ಅನುಕ್ರಮವಾಗಿ ಹಣೆ, ಮೂಗು ಮತ್ತು ತುಟಿಗಳನ್ನು ಮುಟ್ಟಿಸಿ ನಮಸ್ಕಾರ ಮಾಡುತ್ತಾರೆ. ಇದರಿಂದ ಬಹಳ ಕಡಿಮೆ ಪ್ರಮಾಣದಲ್ಲಿ ಚೈತನ್ಯವು ಗ್ರಹಿಸಲ್ಪಡುತ್ತದೆ.

ಇ. ಕೆಲವು ಜನರು ಸಂತರ ಚರಣಗಳ ಮೇಲೆ ಮೂಗನ್ನು ಉಜ್ಜುತ್ತಾರೆ. ಇದರಿಂದ ಚೈತನ್ಯದ ಪ್ರವಾಹವು ನಿಂತು ಹೋಗುತ್ತದೆ.

ಈ. ಕೆಲವರು ಸಂತರ ಚರಣಗಳನ್ನು ಚುಂಬಿಸುತ್ತಾರೆ. ಸಂತರ ಚರಣಗಳನ್ನು ಚುಂಬಿಸುವುದೆಂದರೆ ಕೆಸ್ತ ಜನರು ಪಾದ್ರಿಗಳ ಕೈಗಳನ್ನು ಚುಂಬಿಸುವುದರ ನಕಲು ಮಾಡಿದಂತೆ ಆಗುತ್ತದೆ. ತುಟಿಗಳಿಂದ ಅತ್ಯಲ್ಪ ಪ್ರಮಾಣದಲ್ಲಿ ಚೈತನ್ಯವು ಗ್ರಹಿಸಲ್ಪಡುತ್ತದೆ.

ಉ. ಕೆಲವು ಜನರು ಚರಣಗಳ ಮೇಲೆ ತಲೆಯನ್ನಿಡುವಾಗ ಮೊದಲು ಒಂದು ಕಾಲಿನ ಮೇಲೆ ಅನಂತರ ಇನ್ನೊಂದು ಕಾಲಿನ ಮೇಲೆ ತಲೆಯನ್ನಿಡುತ್ತಾರೆ. ಹೀಗೆ ಮಾಡುವ ಆವಶ್ಯಕತೆ ಇರುವುದಿಲ್ಲ. ಏಕೆಂದರೆ ಯಾವುದಾದರೊಂದು ಚರಣದ ಮೇಲೆ (ಸೌಲಭ್ಯಕ್ಕನುಗುಣವಾಗಿ) ತಲೆಯನ್ನಿಟ್ಟರೆ ಸಾಕಾಗುತ್ತದೆ.

೨. ಸಂತರಿಗೆ ಪುರುಷರು ಮತ್ತು ಸ್ತ್ರೀಯರು ನಮಸ್ಕಾರ ಮಾಡುವ ಯೋಗ್ಯ ಪದ್ಧತಿ
ಸಂತರಿಗೆ ನಮಸ್ಕಾರ ಮಾಡುವಾಗ ಪುರುಷರು ಸಾಷ್ಟಾಂಗ ನಮಸ್ಕಾರ ಹಾಕಬೇಕು. ಸ್ಥಳ ಕಡಿಮೆ ಇದ್ದರೆ ಮತ್ತು ಸಾಷ್ಟಾಂಗ ನಮಸ್ಕಾರ ಹಾಕುವುದು ಸಾಧ್ಯವಿಲ್ಲದಿದ್ದರೆ ಮೊಣಕಾಲೂರಿ ಕುಳಿತುಕೊಂಡು ಬಗ್ಗಿ ನಮಸ್ಕಾರ ಮಾಡಬೇಕು.   ಸ್ತ್ರೀಯರು ಸಂತರಿಗೆ ಮೊಣಕಾಲೂರಿ ಕುಳಿತುಕೊಂಡು ಬಗ್ಗಿ ನಮಸ್ಕಾರ ಮಾಡಬೇಕು.

೩. ಸಂತರ ಚರಣಗಳ ಮೇಲೆ ತಲೆಯನ್ನಿಟ್ಟು ನಮಸ್ಕಾರ ಮಾಡುವ ಯೋಗ್ಯ ಪದ್ಧತಿ

೩ಅ. ನಮ್ಮ ತಲೆಯ ಯಾವ ಭಾಗವನ್ನು ಸಂತರ ಚರಣಗಳ ಮೇಲೆ ಇಡಬೇಕು: ನಾವು ಬ್ರಹ್ಮರಂಧ್ರದಿಂದ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಚೈತನ್ಯವನ್ನು ಗ್ರಹಿಸಬಹುದು. ಆದರೆ ಸಂತರ ಚರಣಗಳ ಮೇಲೆ ಬ್ರಹ್ಮರಂಧ್ರವನ್ನು ಇಡಲು ಸಾಧ್ಯವಾಗುವುದಿಲ್ಲ, ಆದುದರಿಂದ ಹಣೆಯು ಮುಗಿದು ತಲೆಯು ಪ್ರಾರಂಭವಾಗುವ ಭಾಗವನ್ನು ಸಂತರ ಚರಣಗಳ ಮೇಲೆ ಇಡಬೇಕು. ಇದರಿಂದ ಸಂತರ ಚರಣಗಳಿಂದ ಹೊರಬೀಳುವ ಚೈತನ್ಯವನ್ನು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಗ್ರಹಿಸಲು ಸಾಧ್ಯವಾಗುತ್ತದೆ.

೩ಆ. ಸಂತರ ಚರಣಗಳ ಮೇಲೆ ತಲೆಯನ್ನಿಡಲು ಯೋಗ್ಯ ಸ್ಥಳ: ಸಂತರ ಪಾದಗಳ ಹೆಬ್ಬೆರಳುಗಳಿಂದ ಚೈತನ್ಯವು ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಹೊರಬೀಳುತ್ತಿರುತ್ತದೆ; ಆದುದರಿಂದ ತಲೆಯನ್ನು ಪಾದಗಳ ಮಧ್ಯಭಾಗದ ಮೇಲೆ ಇಡದೇ ಹೆಬ್ಬೆರಳುಗಳ ಮೇಲೆ ಇಡಬೇಕು. ತಲೆಯನ್ನು ಇಡಲು ಎರಡೂ ಪಾದಗಳ ಹೆಬ್ಬೆರಳುಗಳು ಉಪಲಬ್ಧವಿದ್ದಲ್ಲಿ ಬಲಗಾಲಿನ ಹೆಬ್ಬೆರಳಿನ ಮೇಲೆ ತಲೆಯನ್ನು ಇಡಬೇಕು.

೩ಇ. ತಲೆಯನ್ನು ಸಂತರ ಚರಣಗಳ ಮೇಲೆ ಇಡುವಾಗ ಕೈಗಳ ಸ್ಥಿತಿ ಹೇಗಿರಬೇಕು?

೧. ಕೆಲವು ಜನರು ಕೈಗಳನ್ನು ಸೊಂಟದ ಹಿಂದೆ ಒಯ್ದು ಪರಸ್ಪರ ಹಿಡಿದುಕೊಂಡು ನಮಸ್ಕಾರ ಮಾಡುತ್ತಾರೆ. ಹೀಗೆ ಮಾಡುವುದರ ಬದಲು (ಎರಡೂ ಚರಣಗಳು ಉಪಲಬ್ಧವಿದ್ದಲ್ಲಿ) ಒಂದು ಕೈಯನ್ನು ಒಂದು ಚರಣದ ಮೇಲೆ ಮತ್ತು ಇನ್ನೊಂದು ಕೈಯನ್ನು ಇನ್ನೊಂದು ಚರಣದ ಮೇಲಿಟ್ಟು ತಲೆಯನ್ನು ಹೆಬ್ಬೆರಳಿನ ಮೇಲೆ ಇಡಬೇಕು. ಒಂದೇ ಚರಣ ಉಪಲಬ್ಧವಿದ್ದಲ್ಲಿ ಎರಡೂ ಕೈಗಳನ್ನು ಒಂದೇ ಚರಣದ ಮೇಲಿಟ್ಟು ತಲೆಯನ್ನು ಹೆಬ್ಬೆರಳಿನ ಮೇಲೆ ಇಡಬೇಕು.

೨. ಕೆಲವರು ಕೈಗಳನ್ನು ನೆಲದ ಮೇಲಿಟ್ಟು ನಮಸ್ಕಾರ ಮಾಡುತ್ತಾರೆ. ಈ ಪದ್ಧತಿಯೂ ಕೂಡಾ ತಪ್ಪಾಗಿದೆ; ಏಕೆಂದರೆ ನೆಲದ ಮೇಲೆ ಕೈಗಳನ್ನಿಟ್ಟು ನಮಸ್ಕಾರ ಮಾಡಿದರೆ ಸಂತರ ಚರಣಗಳಿಂದ ಹೊರಬೀಳುವ ಚೈತನ್ಯವು ನಮಸ್ಕಾರ ಮಾಡುವವರಲ್ಲಿ ಗ್ರಹಿಸಲ್ಪಡುತ್ತದೆ; ಆದರೆ ಆಮೇಲೆ ಅದು ಅವರ ಕೈಗಳ ಮೂಲಕ ನೆಲದೊಳಗೆ ಹೋಗುವುದರಿಂದ ಅವರಿಗೆ ಆ ಚೈತನ್ಯದ ಲಾಭವು ಸಿಗುವುದಿಲ್ಲ.

೩. ಕೆಲವರು ಕೈಗಳನ್ನು ಅಡ್ಡವಾಗಿಟ್ಟು ಅಂದರೆ ತಮ್ಮ ಬಲಗೈಯನ್ನು ಸಂತರ ಬಲಚರಣದ ಮೇಲೆ ಮತ್ತು ತಮ್ಮ ಎಡಗೈಯನ್ನು ಸಂತರ ಎಡಚರಣದ ಮೇಲೆ ಇಟ್ಟು ನಮಸ್ಕಾರ ಮಾಡುತ್ತಾರೆ. ಇದು ಕೆಸ್ತ ಜನರಲ್ಲಿನ ಎದೆಯ ಮೇಲೆ ಅಡ್ಡವಾಗಿ ಕೈಗಳನ್ನಿಡುವ ಪದ್ಧತಿಯ (ಕ್ರಾಸ್ ಪದ್ಧತಿಯಂತೆ) ಯಥಾವತ್ ನಕಲಾಗಿದೆ. ಇದರ ಬದಲು ನಮ್ಮ ಬಲಗೈಯನ್ನು ಸಂತರ ಎಡಚರಣದ ಮೇಲೆ ಮತ್ತು ನಮ್ಮ ಎಡಗೈಯನ್ನು ಸಂತರ ಬಲಚರಣದ ಮೇಲೆ ಇಡಬೇಕು. ಇದು ಹೆಚ್ಚು ಅನುಕೂಲಕರವೂ ಆಗಿದೆ. ಯಾವುದಾದರೊಂದು ಸಂಪ್ರದಾಯದಲ್ಲಿ ಈ ರೀತಿಯ ರೂಢಿಯನ್ನು ಗುರುಗಳೇ ಪ್ರಾರಂಭಿಸಿದ್ದಲ್ಲಿ ಅದೇ ಪದ್ಧತಿಯಲ್ಲಿ ಕೈಗಳನ್ನು ಇಡಬೇಕು. - ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೧೫.೧೨.೨೦೦೩, ಬೆಳಗ್ಗೆ ೧೧.೨೦)

೪. ಕೈಗಳ ಅಂಗೈಗಳು ಚರಣಗಳ ಮೇಲೆ ಬರುವಂತೆ ಕೈಗಳನ್ನು ಇಡಬೇಕು.


೪. ಸಂತರ ಚರಣಗಳ ಮೇಲೆ ತಲೆಯನ್ನಿಟ್ಟು ನಮಸ್ಕಾರ ಮಾಡಿದಾಗ ಬಂದ ಅನುಭೂತಿ: ಮೇಲೆ ಹೇಳಿದಂತಹ ಯೋಗ್ಯ ಪದ್ಧತಿಯಿಂದ ಸಂತರ ಚರಣಗಳ ಮೇಲೆ ತಲೆಯನ್ನಿಟ್ಟು ನಮಸ್ಕಾರ ಮಾಡಿದಾಗ ಸಾಧಕರಿಗೆ ಯಾವ ರೀತಿಯ ಅನುಭೂತಿಗಳು ಬರುತ್ತವೆ ಎನ್ನುವುದು ಮುಂದಿನ ಉದಾಹರಣೆಯಿಂದ ಗಮನಕ್ಕೆ ಬರುತ್ತದೆ.

ಅ. ಪ.ಪೂ.ಭಕ್ತರಾಜ ಮಹಾರಾಜರ ಚರಣಗಳ ಮೇಲೆ ತಲೆಯನ್ನಿಟ್ಟ ಕೂಡಲೇ ಮನಸ್ಸು ನಿರ್ವಿಚಾರವಾಗುವುದು ಮತ್ತು ಅವರು ನನ್ನವರೆನಿಸುವುದು: ಒಂದು ಸಲ ನಾನು ಮೋರಟಕ್ಕಾ, ಇಂದೂರಿಗೆ ಪ.ಪೂ.ಭಕ್ತರಾಜ ಮಹಾರಾಜರ ಅನ್ನಸಂತರ್ಪಣೆಗೆ ಹೋಗಿದ್ದೆ. ಅಲ್ಲಿ ಪ.ಪೂ.ಮಹಾರಾಜರ ದರ್ಶನದ ಸಮಯದಲ್ಲಿ ನಾನು ಅವರ ಚರಣಗಳ ಮೇಲೆ ತಲೆಯನ್ನಿಟ್ಟೆ, ಅನಂತರ ನನಗೆ ನಾನು ಯಾರು? ಎಲ್ಲಿದ್ದೇನೆ ಎಂದು ತಿಳಿಯದಂತಾಯಿತು. ನನಗೆ ಯಾವುದರ ಅರಿವೂ ಇರಲಿಲ್ಲ. ನಮಸ್ಕಾರ ಮಾಡಿದ ನಂತರ ನಮ್ಮ ಸಾಮಾನುಗಳನ್ನು ಇಡಲು ಬೇರೆ ಕಡೆಗೆ ನಮ್ಮನ್ನು ಕರೆದುಕೊಂಡು ಹೋದರು. ನಾನು ಸಾಮಾನುಗಳನ್ನು ಇಡಲೆಂದು ಹೋದೆ, ಆದರೆ ನಾನು ಎಲ್ಲ ಸಾಮಾನುಗಳನ್ನು ಬಾಬಾರವರ (ಪ.ಪೂ.ಭಕ್ತರಾಜ ಮಹಾರಾಜರ) ಬಳಿಯೇ ಬಿಟ್ಟುಬಂದಿದ್ದೆ. ಬಾಬಾರವರ ಪ್ರಥಮ ದರ್ಶನದಿಂದ ನನಗೆ ಬಾಬಾರವರು ನನ್ನವರೇ ಆಗಿದ್ದಾರೆ ಮತ್ತು ನಾನು ಬಾಬಾರವಳೇ ಆಗಿದ್ದೇನೆ ಎನಿಸತೊಡಗಿತು. - ಸೌ.ಸುಧಾ ಸುಧಾಕರ ಮಾಂಜ್ರೇಕರ, ಬೊರಿವಲಿ, ಮುಂಬೈ.
(ಸಂತರ ಚರಣಗಳಿಂದ ಪ್ರಕ್ಷೇಪಿಸಲ್ಪಡುವ ಚೈತನ್ಯಶಕ್ತಿಯ ಲಾಭವು ಸಾಧಕಿಗೆ ಲಭಿಸಿದ್ದರಿಂದ ಅವರ ಮನೋದೇಹದ ಶುದ್ಧೀಕರಣವಾಗಲು ಸಹಾಯವಾಯಿತು. ಮನೋದೇಹದ ಕಾರ್ಯವೆಂದರೆ ವಿಚಾರ ಅಥವಾ ಇಚ್ಛೆಗಳನ್ನು ನಿರ್ಮಿಸುವುದು. ಮನೋದೇಹದ ಶುದ್ಧೀಕರಣವಾದುದರಿಂದ ವಿಚಾರ ಅಥವಾ ಇಚ್ಛೆ ಇವುಗಳ ನಿರ್ಮಿತಿಯು ಸ್ವಲ್ಪ ಕಾಲದ ಮಟ್ಟಿಗೆ ಸ್ಥಗಿತವಾಗಿತ್ತು, ಅಂದರೆ ಸಾಧಕಿಗೆ ನಿರ್ವಿಚಾರ ಅವಸ್ಥೆಯು ಪ್ರಾಪ್ತವಾಗಿತ್ತು. - ಸಂಕಲನಕಾರರು)

(ಆಧಾರ : ಸನಾತನ ಸಂಸ್ಥೆಯ ಕಿರುಗ್ರಂಥ 'ನಮಸ್ಕಾರಗಳ ಯೋಗ್ಯ ಪದ್ಧತಿ')

ವಿಷಯದಲ್ಲಿನ ಆಧ್ಯಾತ್ಮಿಕ ಸಂಜ್ಞೆಗಳನ್ನು ಈ ಕೊಂಡಿಯಲ್ಲಿ ತಿಳಿದುಕೊಳ್ಳಿ.

ಸಂಬಂಧಿತ ವಿಷಯಗಳು
Dharma Granth

1 comment:

  1. Very very meaningful information.
    Surely I'll inform this to my family members and friends.

    Thanks,
    Ramesh

    ReplyDelete

Note: only a member of this blog may post a comment.