ಆಚಾರಧರ್ಮ ಎಂದರೇನು? ಅದರಿಂದ ಏನು ಲಾಭ?

‘ಆಚಾರಧರ್ಮ’ವೆಂದರೆ ಜೀವನದ ಆಧ್ಯಾತ್ಮೀಕರಣ!

‘ಆಚಾರಧರ್ಮ’ವೆಂದರೆ ಯೋಗ್ಯ ಆಚಾರ-ವಿಚಾರಗಳ ಪಾಲನೆಯನ್ನು ಮಾಡುವುದು, ಕರ್ತವ್ಯಕರ್ಮಗಳು ಮತ್ತು ಧರ್ಮಾಚರಣೆಯ ಕೃತಿಗಳು, ಇಷ್ಟೇ ಹೆಚ್ಚಿನವರ ಕಣ್ಣೆದುರಿಗೆ ಬರುತ್ತವೆ. ಯಾರೂ ಆಚಾರಧರ್ಮದ ಬಗ್ಗೆ ಇಷ್ಟು ಸಂಕುಚಿತ ಅರ್ಥವನ್ನಿಟ್ಟುಕೊಳ್ಳಬಾರದು. ‘ಈಶ್ವರನ ಚರಣಗಳವರೆಗೆ ತಲುಪಲು ಸಹಾಯ ಮಾಡುವ ಜೀವನದಲ್ಲಿನ ಪ್ರತಿಯೊಂದು ಕೃತಿಯೆಂದರೆ ಆಚರಣೆ ಮತ್ತು ಅವುಗಳನ್ನು ಕಲಿಸುವ ಧರ್ಮವೆಂದರೆ ‘ಆಚಾರಧರ್ಮ’ ಎಂಬ ವ್ಯಾಪಕ ಅರ್ಥದಲ್ಲಿ ಅದರ ವ್ಯಾಖ್ಯೆಯನ್ನು ಮಾಡಬಹುದು. ಸಂಕ್ಷಿಪ್ತವಾಗಿ ಹೇಳುವುದಾದರೆ ‘ಆಚಾರಧರ್ಮ’ವೆಂದರೆ ದೈನಂದಿನ ಜೀವನದಲ್ಲಿನ ಪ್ರತಿಯೊಂದು ವಿಷಯವನ್ನು ಆಧ್ಯಾತ್ಮೀಕರಣಗೊಳಿಸುವುದು; ಅಂದರೆ ಪ್ರತಿಯೊಂದು ವಿಷಯವನ್ನು ಸಾತ್ತ್ವಿಕ ಮತ್ತು ಚೈತನ್ಯಮಯಗೊಳಿಸುವುದು. ಆದುದರಿಂದಲೇ ಆಚಾರಧರ್ಮದ ಪಾಲನೆಯಿಂದ ಈಶ್ವರಪ್ರಾಪ್ತಿಯ ಕಡೆಗೆ ಬೇಗನೇ ಮಾರ್ಗಕ್ರಮಣವಾಗಲು ಸಹಾಯವಾಗುತ್ತದೆ. ಕಸ ತೆಗೆಯುವಾಗ ಒಳಗಿನಿಂದ ಹೊರಗಿನ ದಿಕ್ಕಿನತ್ತ ಅಂದರೆ ಬಾಗಿಲಿನ ಕಡೆಗೆ ತೆಗೆಯುವುದು, ಪುರುಷರು ಪ್ಯಾಂಟ್-ಶರ್ಟ್ ಧರಿಸುವ ಬದಲು ಜುಬ್ಬಾ-ಪೈಜಾಮವನ್ನು ಧರಿಸುವುದು ಮತ್ತು ಸ್ತ್ರೀಯರು ಸಲ್ವಾರ್-ಕುರತಾದ ಬದಲು ಸೀರೆಯನ್ನುಟ್ಟುಕೊಳ್ಳುವುದು, ಕಡಿಮೆ ಬಟ್ಟೆ ಧರಿಸಬಾರದು, ಸ್ತ್ರೀ-ಪುರುಷರು ಪ್ರತಿದಿನ ಹಣೆಗೆ ಕುಂಕುಮ-ತಿಲಕವನ್ನು ಇಟ್ಟುಕೊಳ್ಳುವುದು, ಸ್ತ್ರೀಯರು ಕೂದಲನ್ನು ಬಾಚುವಾಗ ಒಂದು ಜಡೆಯ ಬದಲು ಎರಡು ಜಡೆಗಳನ್ನು ಹಾಕಿಕೊಳ್ಳುವುದು, ಕೂದಲನ್ನು ಹಾಗೆಯೇ ಬಿಡಬಾರದು ಇಂತಹ ಅನೇಕ ವಿಷಯಗಳು ಆಚಾರಧರ್ಮದಲ್ಲಿ ಬರುತ್ತವೆ.’

‘ಆಚಾರಧರ್ಮ’ವು ಧರ್ಮ ಮತ್ತು ಸಾಧನೆಯ ಅಡಿಪಾಯವಾಗಿದೆ!

‘ಆಚಾರಃ ಪ್ರಭವೋ ಧರ್ಮಃ’ ಅಂದರೆ ‘ಧರ್ಮವು ಆಚಾರದಿಂದ ಉತ್ಪನ್ನವಾಗಿದೆ’. ನಮ್ಮ ಧಾರ್ಮಿಕ ಜೀವನದ ನಿರ್ಮಿತಿಯು (ರಚನೆಯು) ಆಚಾರಧರ್ಮದ ಮೇಲೆ ಅವಲಂಬಿಸಿರುತ್ತದೆ. ಧರ್ಮಾಚರಣೆಯ, ಸಾಧನೆಯ ಉದ್ದೇಶವು ‘ಈಶ್ವರಪ್ರಾಪ್ತಿ’ ಯಾಗಿರುತ್ತದೆ. ಧರ್ಮಾಚರಣೆಯನ್ನು, ಸಾಧನೆಯನ್ನು ಮಾಡುವ ಮನಸ್ಸಿನ ಪ್ರವೃತ್ತಿಯು ಸತ್ತ್ವಗುಣದ ಮೇಲೆ ಅವಲಂಬಿಸಿರುತ್ತದೆ. ಸಾಮಾನ್ಯ ಜನರು ರಜೋಗುಣಿ-ತಮೋಗುಣಿ ಯಾಗಿರುವುದರಿಂದ ಅವರು ಕೂಡಲೇ ಸಾಧನೆಯ ಕಡೆಗೆ ಹೊರಳುವುದಿಲ್ಲ. ಆಚಾರ ಧರ್ಮದ ಪಾಲನೆಯಿಂದ ಜನರ ಸಾತ್ತ್ವಿಕತೆಯು ನಿಧಾನವಾಗಿ ಹೆಚ್ಚಾಗತೊಡಗಿದಂತೆ ಮುಂದೆ ಅವರು ಸಾಧನೆಯ ಕಡೆಗೆ ಹೊರಳುತ್ತಾರೆ. ಅಲ್ಲದೇ ಆಚಾರಧರ್ಮದ ಪಾಲನೆಯನ್ನು ದಿನದ ೨೪ ಗಂಟೆ ಮಾಡಬೇಕಾಗುವುದರಿಂದ ಮುಂದೆ ದಿನವಿಡೀ ಸಾಧನೆಯನ್ನು ಮಾಡುವ ಅಡಿಪಾಯವೂ ನಿರ್ಮಾಣವಾಗುತ್ತದೆ.

ಆಚಾರಧರ್ಮದಿಂದ ವ್ಯಾವಹಾರಿಕ ಮತ್ತು ರಾಷ್ಟ್ರೀಯ ಜೀವನದ ಉತ್ಕರ್ಷವೂ ಆಗುತ್ತದೆ!

ಆಚಾರಗಳ ಪಾಲನೆಯಿಂದ ಕೇವಲ ಆಧ್ಯಾತ್ಮಿಕ ಲಾಭವಷ್ಟೇ ಆಗುತ್ತದೆ ಎಂದೇನಿಲ್ಲ, ಅದರೊಂದಿಗೆ ವ್ಯಕ್ತಿಯ ವ್ಯಾವಹಾರಿಕ ಜೀವನದ ಉತ್ಕರ್ಷವೂ ಆಗುತ್ತದೆ. ಉದಾ. ‘ಸತ್ಯದಿಂದ ನಡೆದುಕೊಳ್ಳಬೇಕು’ ಎಂಬ ಆಚಾರದ ಪಾಲನೆಯಿಂದ ವ್ಯಕ್ತಿಗೆ ಸುಳ್ಳು ಮಾತನಾಡಿದ ಪಾಪವು ತಗಲುವುದಿಲ್ಲ, ಮಾತ್ರವಲ್ಲದೇ ಅವನಲ್ಲಿ ನೈತಿಕತೆ ಮತ್ತು ಸುಸಂಸ್ಕೃತತೆ ಎಂಬ ಗುಣಗಳ ವಿಕಾಸವೂ ಆಗುತ್ತದೆ. ಆಚಾರಗಳ ಪಾಲನೆಯಿಂದ ವ್ಯಕ್ತಿಗೆ ಒಂದು ರೀತಿಯ ಶಿಸ್ತು ಬರುತ್ತದೆ. ಶಿಸ್ತುಬದ್ಧತೆಯು ಆದರ್ಶ ಜೀವನಪದ್ಧತಿಯ ಒಂದು ಮಹತ್ವದ ಗುಣವಾಗಿದೆ. ಆಚಾರವು ಹಿಂದೂಗಳ ಶ್ರದ್ಧೆಯ ಮತ್ತು ಸಂಸ್ಕೃತಿಯ ನಿಯಮವಾಗಿದೆ. 

ವಿವಿಧ ಉಪಾಸನಾ ಪಂಥ ಮತ್ತು ಸಂಪ್ರದಾಯಗಳಲ್ಲಿನ ಹಿಂದೂಗಳ ಧರ್ಮಾಚರಣೆಯ ಪದ್ಧತಿಗಳು ವಿಭಿನ್ನವಾಗಿದ್ದರೂ, ಸದಾಚಾರ ಅಥವಾ ಶಿಷ್ಟಾಚಾರ ಇವು ಧರ್ಮದ ಒಂದು ಪ್ರಮಾಣವೆಂದು ಪರಿಗಣಿಸಲ್ಪಟ್ಟಿರುವುದರಿಂದ ಧರ್ಮದ ಈ ಸಮಾನ ನಿಯಮದಿಂದ ಹಿಂದೂಗಳು ಪರಸ್ಪರ ಬಂಧಿಸಲ್ಪಟ್ಟಿದ್ದಾರೆ. ಹಿಂದೂಗಳ ಧಾರ್ಮಿಕ ಒಗ್ಗಟ್ಟಿನ ಮೇಲೆ ಹಿಂದೂಗಳ ಐಕ್ಯವು ಅವಲಂಬಿಸಿಕೊಂಡಿದೆ. ಐಕ್ಯದ ಮೇಲೆ ಸಮಾಜದ ಉನ್ನತಿ ಮತ್ತು ಪರ್ಯಾಯವಾಗಿ ರಾಷ್ಟ್ರದ ಉತ್ಕರ್ಷವೂ ಅವಲಂಬಿಸಿಕೊಂಡಿದೆ.

(ಹೆಚ್ಚಿನ ಮಾಹಿತಿಗಾಗಿ ಓದಿ - ಸನಾತನ ಸಂಸ್ಥೆಯ ಗ್ರಂಥ 'ಆಚಾರಧರ್ಮದ ಪ್ರಾಸ್ತಾವಿಕ')

No comments:

Post a Comment

Note: only a member of this blog may post a comment.